ಹಾಸನ ಜಿಲ್ಲೆಯಾದ್ಯಂತ ಹಲವೆಡೆ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಬೇಸಾಯ ಚಟುವಟಿಕೆಗಳನ್ನು ಪ್ರಾರಂಭಿಸಿದ್ದಾರೆ. ಆಲೂಗಡ್ಡೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲು ಆಲೂಗಡ್ಡೆ ಬೀಜಗಳ ಮಾರಾಟ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು ಎಪಿಎಂಸಿ ಹಾಗೂ ಶೈತ್ಯಾಗಾರಗಳಿಂದ ಆಲೂಗಡ್ಡೆ ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ₹1,500 ರಿಂದ ₹1,600ರವರೆಗೆ ಈಗಾಗಲೇ ದರ ನಿಗದಿ ಪಡಿಸಲಾಗಿದೆ.
ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಉತ್ತಮ ದರ್ಜೆ ಬೀಜಗಳನ್ನು ಮಾರಾಟ ಮಾಡುವಂತೆ ಕೃಷಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಿತ್ತನೆ ಮಾಡುವ ಮೊದಲು ರೈತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಭುರಾಜ್ ತಿಳಿಸಿದ್ದಾರೆ.
“ಬಿತ್ತನೆಗಾಗಿ ಈಗಾಗಲೇ ಆಲೂಗಡ್ಡೆಗಳನ್ನು ಖರೀದಿಸಿರುವ ರೈತರು, ಗಡ್ಡೆಗಳನ್ನು ತಕ್ಷಣ ಬಿತ್ತನೆ ಮಾಡಿದರೆ, ಮೊಳಕೆ ಒಡೆಯುವುದಿಲ್ಲ. ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಗಡ್ಡೆಗಳು ಕೊಳೆಯುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗಡ್ಡೆ ಖರೀದಿಸಿದ ನಂತರ ಕನಿಷ್ಠ 10-15 ದಿನಗಳವರೆಗಾದರೂ ನೆರಳಿನಲ್ಲಿ, ಗಾಳಿಯಾಡುವಂತಹ ಸ್ಥಳದಲ್ಲಿ ಹರಡಿ ಹದಗೊಳಿಸಬೇಕು” ಎಂದು ಸೂಚನೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಭತ್ತದ ಆಸೆಗೆ ಮನೆಯ ಕಿಟಕಿ, ಹೆಂಚು ಪುಡಿ ಮಾಡಿದ ಕಾಡಾನೆ
“ಹದಗೊಳಿಸಲು ಹರಡಿರುವ ಗಡ್ಡೆಗಳ ಮೇಲೆ ಬ್ಯಾವಿಸ್ಟಿನ್ ಶಿಲೀಂಧ್ರ ನಾಶಕ ಪುಡಿಯನ್ನು ಎರಚಬೇಕು. 10-15 ದಿನಗಳ ನಂತರ, ಬಿತ್ತನೆಗೆ ಒಂದು ದಿನ ಮುಂಚಿತವಾಗಿ ದೊಡ್ಡ ಗಡ್ಡೆಗಳನ್ನು ಕಣ್ಣುಗಳ ಆಧಾರದ ಮೇಲೆ ಕತ್ತರಿಸಬೇಕು. ಅಂತಹ ಗಡ್ಡೆಗಳನ್ನು ಸಂಪೂರ್ಣವಾಗಿ ಬಳಸಬಹುದು. ಈ ಗಡ್ಡೆಗಳನ್ನು ದುಂಡಾಣು ಹಾಗೂ ಶಿಲೀಂಧ್ರ ನಾಶಕಗಳ ಮಿಶ್ರಣದ ದ್ರಾವಣದಲ್ಲಿ 10-15 ನಿಮಿಷ ನೆನೆಸಿ ಬೀಜೋಪಚಾರ ಮಾಡಬೇಕು” ಎಂದು ಮಾಹಿತಿ ನೀಡಿದ್ದಾರೆ.