- ಹೋರಾಟದ ಫಲವಾಗಿ ಕೇಂದ್ರಕ್ಕೆ ವರದಿ ಶಿಫಾರಸು
- ಹಾವೇರಿಯಲ್ಲಿ ದಲಿತ ಸಂಘಟನೆಗಳ ಸಂಭ್ರಮ
ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಹೇಳಿದ್ದಾರೆ.
ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಿದನ್ನು ಸ್ವಾಗತಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತಪರ ಹಾಗೂ ಜನಪರ ಸಂಘಟನೆಗಳು ಹಾವೇರಿಯ ಪ್ರವಾಸಿ ಮಂದಿರದಲ್ಲಿ ಸಂಭ್ರಮ ಸಭೆ ನಡೆಸಿದ್ದಾರೆ. ಪರಸ್ಪರ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವೇಳೆ ಉಡಚಪ್ಪ ಮಾಳಗಿ ಮಾತನಾಡಿದರು.
“ಎಲ್ಲ ದಲಿತ ಪರ ಸಂಘಟನೆಯಗಳು ಒಗ್ಗಟ್ಟಾಗಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಯಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಈ ಹಿಂದೆ ಧರ್ಮಸಿಂಗ್ ನೇತೃತ್ವದ ಸರ್ಕಾರ ಸದಾಶಿವ ಆಯೋಗವನ್ನು ರಚನೆ ಮಾಡಿತ್ತು. ನ್ಯಾಯಮೂರ್ತಿ ಸದಾಶಿವ ಅವರು 7 ವರ್ಷಕ್ಕೂ ಹೆಚ್ಚು ಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2012ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಬಳಿಕ, ವರದಿಯ ಜಾರಿಗಾಗಿಯೂ ಹೋರಾಟ ನಡೆಸಬೇಕಾಯಿತು. ಹೋರಾಟದ ಫಲವಾಗಿ ವರದಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ” ಎಂದರು.
ಲಿಡ್ಕರ್ ಉಪಾಧ್ಯಕ್ಷ ಡಿ.ಎಸ್ ಮಾಳಗಿ ಮಾತನಾಡಿ, “ಸದಾಶಿವ ಆಯೋಗ ನಮ್ಮೆಲ್ಲ ಸಮುದಾಯಕ್ಕೆ ಪ್ರಗತಿ ಹಾದಿ ತೊರಿಸುತ್ತದೆ. ಇದಕ್ಕಾಗಿ ದಲಿತಪರ ಸಂಘಟನೆಗಳ ಶ್ರಮ ನಿರಂತರವಾಗಿದೆ. ಸರ್ಕಾರ ನಮಗೆ ನ್ಯಾಯ ಒದಗಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿರುವುದು ಸಂತೋಷ ಉಂಟು ಮಾಡಿದೆ” ಎಂದರು.
ದಲಿತ ಸಂಘಟನೆಯ ಮುಖಂಡರಾದ ಬಸವರಾಜ ಹೆಡಿಗೊಂಡ ಮಾತನಾಡಿ, “ಸದಾಶಿವ ಆಯೋಗ ಜಾರಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದು, ನಮ್ಮೆಲ್ಲರ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಹೋರಾಟಗಾರರಿಗೂ ಹಾಗೂ ರಾಜ್ಯ ಸರ್ಕಾರಕ್ಕೂ ಅಭಿನಂನೆಗಳನ್ನು ಸಲ್ಲಿಸುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ?: ಮೀಸಲು ಹಂಚಿಕೆ | ಜಾತ್ರೆಯ ಬೆಂಡು-ಬತ್ತಾಸು ಹಂಚಿಕೆಯೂ ಇಷ್ಟೊಂದು ಕಳಪೆಯಾಗಿ ಇರುವುದಿಲ್ಲ ಎಂದ ಜೆಡಿಎಸ್
ಈ ಸಂದರ್ಭದಲ್ಲಿ ಡಿಎಸ್ ಎಸ್ ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ, ದುರಗೇಶ ಮೇಗಲಮನಿ, ಮುಖಂಡರಾದ ಸಂಜಯಗಾಂಧಿ ಸಂಜೀವಣ್ಣನವರ, ಮಂಜುನಾಥ ಮಡಿವಾಳರ, ವಿಭೂತಿ ಶೆಟ್ಟಿ,ಶ್ರೀಕಾಂತ ಗಟ್ಟಿ, ಸಚಿನ ಮರೆಣ್ಣನವರ, ಮಲ್ಲೇಶ ಕಡಕೊಳ, ವೈ ಎನ್ ಮಾಸೂರ, ವಕೀಲರಾದ ಹನಮಂತಪ್ಪ ಸೊಟ್ಟಪ್ಪನವರ, ಶಿವರಾಜ ಹರಿಜನ, ಭಿಮಣ್ಣ ಯಲ್ಲಾಪುರ, ಚಂದ್ರು ಯತ್ನಳ್ಳಿ, ನಾಗರಾಜ ಹುಣಸಿಮರದ, ಗುಡ್ಡಪ್ಪ ಬಣಕಾರ, ಗುಡ್ಡಪ್ಪ ಚಿಕ್ಕಪ್ಪನವರ, ಮಾರುತಿ ಸೊಟ್ಟಪ್ಪನವರ, ಶಿವಣ್ಣ ಕನವಳ್ಳಿ, ನಾಗರಾಜ ಮಾಳಮ್ಮನವರ, ಜಗದೀಶ ಹರಿಜನ, ನಾಗರಾಜ ಮೇವುಂಡಿ, ಮೈಲಪ್ಪ ಗೊರಕ್ಕನವರ, ನಾಗರಾಜ ಹುಣಸಿಮರದ, ದುರಗೇಶ ಮಾಳಗಿ, ಸುಭಾಷ ಶೆಟ್ಟಿ ಸೇರಿದಂತೆ ದಲಿತ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಡಿದ್ದರು.