ಭಾರೀ ಮಳೆ ಗಾಳಿಯಿಂದ ಕೆಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಒಂದೆಡೆ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಇನ್ನೊಂದೆಡೆ ಮನೆಯ ಮೇಲ್ಛಾವಣಿ ಹಾರಿದ್ದು, ಬಾಳೆ ಬೆಳೆ ಹಾನಿಯಾಗಿರುವ ಘಟನೆ ನಡೆದಿದೆ.
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಸಾವಿಗೀಡಾಗಿದ್ದಾರೆ. ಮಾದರಹಳ್ಳಿ ಬಳಿಯ ಹರಳಹಳ್ಳಿ ಕ್ರಾಸ್ ಬಳಿ ಮರದ ಕೆಳಗೆ ನಿಂತಿದ್ದ ವೇಳೆ ವೈದ್ಯನಾಥಪುರದ ಮಧು (34) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಶಿವಪುರದ ಗೌರಮ್ಮ (80) ಮನೆಯಲ್ಲಿದ್ದಾಗ ಸಿಡಿಲಿನ ಶಬ್ದಕ್ಕೆ ಹೃದಯಾಘಾತವಾಗಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಮಳೆಯಿಂದ ತುಂಬಿದ ರಸ್ತೆಗಳು; ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ಮೇಲ್ಛಾವಣಿ ಹಾರಿದೆ. ಬಿರುಗಾಳಿ ಮಳೆಗೆ ಹಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯಗೊಂಡಿದೆ. ಮದ್ದೂರು ಪಟ್ಟಣದ ಬಳಿ ಸರ್ವೀಸ್ ರಸ್ತೆಗೆ ಬೃಹತ್ ಮರ ಉರುಳಿ ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ಚಾಮರಾಜನಗರ: ಚಾಮರಾಜನಗರದ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಕುರಟ್ಟಿ ಹೊಸೂರು ಗ್ರಾಮದ ಪೊನ್ನಶೆಟ್ಟಿ ಎಂಬುವವರ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದಿದ್ದು, ಅದೃಷ್ಟವಶಾತ್ ಮನೆಯ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾತ್ರಿ ಮಲಗಿದ್ದಾಗ ದಿಢೀರ್ ಸದ್ದು ಕೇಳಿದ್ದರಿಂದ ಮಲಗಿದ್ದವರು ಎದ್ದು ಹೊರಬಂದಿದ್ದಾರೆ. ಇದ್ದಕ್ಕಿದ್ದಂತೆ ಮನೆ ಸಂಪೂರ್ಣವಾಗಿ ನೆಲಕ್ಕುರುಳಿದೆ. ಇದೀಗ ಮನೆ ಕಳೆದುಕೊಂಡು ಕುಟಂಬ ಬೀದಿಗೆ ಬಂದಿದೆ. ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆ ಕುಸಿದು ಚಾವಣಿ ಸಂಪೂರ್ಣ ಹಾನಿಯಾಗಿರುವುದರಿಂದ ಮನೆಯಲ್ಲಿದ್ದ ಬಟ್ಟೆ, ಆಹಾರ ಧಾನ್ಯಗಳು ಮಾತ್ರವಲ್ಲದೆ ಫಿಡ್ಜ್, ಟಿವಿ, ಮಂಚ ಎಲ್ಲವೂ ಜಖಂ ಆಗಿವೆ.
ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಬಾಳೆ
ತಡರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಹತ್ತಾರು ಎಕರೆ ಬಾಳೆ ಬೆಳೆ ನೆಲಕಚ್ಚಿದೆ. ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ರವಿಚಂದ್ರ, ನವೀನ್, ಶರತ್, ಪರಮೇಶ್ವರಪ್ಪ, ನಾಗಮ್ಮ ಮೊದಲಾದ ರೈತರಿಗೆ ಸೇರಿದ ಬಾಳೆ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯವರು ಬೆಳಗೆ ಪರಿಹಾರ ಘೋಷಣೆ ಮಾಡಬೇಕೆಂದು ಸಂತ್ರಸ್ತ ರೈತರು ಒತ್ತಾಯಿಸಿದ್ದಾರೆ.
ಮೈಸೂರಲ್ಲಿ ಬಾಳೆ ತೋಟ ನಾಶ
ಮೈಸೂರು ಜಿಲ್ಲೆಯಲ್ಲಿಯೂ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದ ರೈತ ಸೋಮಣ್ಣ ಎಂಬುವವರಿಗೆ ಸೇರಿದ ಬಾಳೆ ತೋಟ ನೆಲಕಚ್ಚಿದ್ದು, 30 ರಿಂದ 35 ಲಕ್ಷ ರೂ. ಬೆಲೆ ಬಾಳುವ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಕಂಗಲಾಗಿರುವ ರೈತ ಸೋಮಣ್ಣ, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.