ರಾಜ್ಯಾದ್ಯಂತ ಭಾರೀ ಮಳೆ | ಮೂವರ ಸಾವು; ಹಲವೆಡೆ ಅಪಾರ ಹಾನಿ

Date:

ಕಲಬುರಗಿ, ಚಿಕ್ಕಮಗಳೂರು, ಬೆಂಗಳೂರು, ರಾಯಚೂರು, ಮೈಸೂರು, ಮಂಡ್ಯ ಹಾಗೂ ದಾವಣಗೆರೆ ಜಿಲ್ಲೆ ಸೇರಿದಂತೆ ಹಲವೆಡೆ ಭಾನುವಾರ ಹಾಗೂ ಸೋಮವಾರ ಭಾರೀ ಮಳೆಯಾಗಿದೆ. ಬಾಲಕ ಸೇರಿದಂತೆ ಮೂವರು ಸಾವಿಗೀಡಾಗಿದ್ದಾರೆ. ಹಲವೆಡೆ ಬಹುತೇಕ ಪ್ರಮಾಣದ ಬೆಳೆ ಹಾನಿಯಾಗಿದೆ. ಕೆಲವೆಡೆ ವಿದ್ಯುತ್ ಕಂಬಗಳು ಮತ್ತು ಮರಗಳು ಧರೆಗೆ ಉರುಳಿವೆ. ಕೆಲ ಜಿಲ್ಲೆಗಳಲ್ಲಿ ಮನೆಗಳಿಗೆ ಅಪಾರ ಹಾನಿಯುಂಟಾಗಿದ್ದು, ಹಲವು ಜಾನುವಾರುಗಳು ಮೃತಪಟ್ಟಿವೆ. 

ಬೆಂಗಳೂರು: ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಸೋಮವಾರ, ಕೆ.ಪಿ ಅಗ್ರಹಾರದ ರಾಜಕಾಲುವೆಯಲ್ಲಿ ಲೋಕೇಶ್‌ (31) ಎಂಬವರ ಮೃತದೇಹ ಪತ್ತೆಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಲೋಕೇಶ್‌ ಅವರು ಮಾತ್ರೆಗಳನ್ನು ತರಲು ಔಷಧದ ಅಂಗಡಿಗೆ ತೆರಳಿದ್ದರು. ಹಿಂತಿರುಗಿ ಬರುವಾಗ ತುಂಬಿ ಹರಿಯುತ್ತಿದ್ದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. 

ಮಳೆ–ಗಾಳಿಯಿಂದಾಗಿ ಕಬ್ಬನ್ ಪಾರ್ಕ್‌ನ 40ಕ್ಕೂ ಹೆಚ್ಚು ಮರಗಳು ಬುಡಸಹಿತ ಧರೆಗುರುಳಿವೆ. ಮಲ್ಲೇಶ್ವರದ ನಿಹಾನ್‌ ಚಿನ್ನಾಭರಣ ಮಳಿಗೆಗೆ ಕಾಲುವೆಯ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೋಲಾರ: ಆಲಿಕಲ್ಲು ಮಳೆ ಸುರಿದ ಪರಿಣಾಮ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ 756 ಎಕರೆ ಮಾವು ಬೆಳೆ ನಷ್ಟವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಲವೆಡೆ, ಮೂಡಿಗೆರೆ, ಶೃಂಗೇರಿ ಸುತ್ತಲಿನ ಭಾಗದಲ್ಲಿ ಮಳೆಯಾಗಿದೆ. 

ಮೈಸೂರು, ಹಾಸನ, ಚಾಮರಾಜನಗರ, ಕೊಡಗಿನ‌ಲ್ಲಿ ಸೋಮವಾರ ಸುರಿದ ಭಾರೀ ಮಳೆಯಿಂದ 69ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾಸನ ಜಿಲ್ಲೆ ಆಲೂರು ತಾಲೂಕಿನ ಕುಂಬಾರಹಳ್ಳಿಯಲ್ಲಿ ಸಿಡಿಲು ಬಡಿದು ಹೋರಿ ಮೃತಪಟ್ಟಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಬಹುತೇಕ ಬೆಳೆ ಹಾನಿಯಾಗಿದೆ.

ಮೈಸೂರಿನಲ್ಲಿ ನೆಲಕ್ಕುರುಳಿರುವ ಮಳೆ

ಚಿತ್ರದುರ್ಗ: ಜಿಲ್ಲೆಯ ಹಲವೆಡೆ 35 ಮನೆಗಳು ಭಾಗಶಃ ಹಾನಿಗೀಡಾಗಿವೆ. ಚಿತ್ರದುರ್ಗ, ಧರ್ಮಪುರದ ಹಲಗಲದ್ದಿಯಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಬಹುತೇಕ ಕಡೆ ಕಟಾವಿಗೆ ಬಂದಿದ್ದ ಬೆಳೆ ಜಲಾವೃತವಾಗಿದೆ.

ದಾವಣಗೆರೆ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಅಂದಾಜು 445 ಎಕರೆ ಭತ್ತ, 38 ಎಕರೆ ಬಾಳೆ, 20 ಎಕರೆ ಪಪ್ಪಾಯಿ ಬೆಳೆಗೆ ಹಾನಿಯಾಗಿದ್ದು, ಜಗಳೂರು ತಾಲೂಕಿನ ಚಿಕ್ಕಉಜ್ಜನಿ ಗ್ರಾಮದ ಚಂದ್ರಶೇಖರ್ ಅವರ ಒಂದು ಎತ್ತು ಸಿಡಿಲು ಬಡಿದು ಮೃತಪಟ್ಟಿದೆ.

ಬಾಳೆ ಬೆಳೆ ಹಾನಿ

ಹರಿಹರ ತಾಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ 295 ಎಕರೆ ಭತ್ತದ ಬೆಳೆ ನಷ್ಟವಾಗಿದ್ದು, ₹18.63 ಲಕ್ಷ ಹಾನಿಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 150 ಎಕರೆ ಭತ್ತದ ಬೆಳೆ ಹಾಳಾಗಿದ್ದು, ₹30 ಲಕ್ಷದಷ್ಟು ನಷ್ಟವಾಗಿದೆ. ಜಿಲ್ಲೆಯಲ್ಲಿ 14 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸಂತೇಬೆನ್ನೂರು ಸಮೀಪದ ಕೊಂಡದಹಳ್ಳಿ ಗ್ರಾಮದಲ್ಲಿ ತೆಂಗು ಹಾಗೂ ಅಡಿಕೆ ಮರಗಳಿಗೆ ಸಿಡಿಲು ಬಡಿದು ಸುಟ್ಟು ಹೋಗಿವೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ₹79.40 ಲಕ್ಷ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಮಳೆಯಾಗಿದೆ. ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಬೀರಪ್ಪ ಸಾಬಣ್ಣ (55) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕೊನಸಾಗರ ಗ್ರಾಮದಲ್ಲಿ ಒಂದು ಎತ್ತು ಹಾಗೂ ಆಕಳು ಮೃತಪಟ್ಟಿವೆ.

ಕೊಪ್ಪಳ: ಜಿಲ್ಲೆಯ ಗುಳದಳ್ಳಿ ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀಕಾಂತ ದೊಡ್ಡನಗೌಡ ಮೇಟಿ (16) ಭಾನುವಾರ ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಶಿವಪುರದಿಂದ ದ್ವಿಚಕ್ರ ವಾಹನದ ಮೇಲೆ ಮರಳಿ ಬರುತ್ತಿದ್ದ ಶ್ರೀಕಾಂತ, ಗಾಳಿಗೆ ಟೋಪಿ ಹಾರಿದ್ದರಿಂದ ಅದನ್ನು ತರಲು ವಾಹನದಿಂದ ಕೆಳಗೆ ಇಳಿದು ಹೋಗುತ್ತಿದ್ದಂತೆ ಸಿಡಿಲು ಬಡಿದಿದೆ ಎನ್ನಲಾಗಿದೆ.

ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ 58 ವಿದ್ಯುತ್‌ ಕಂಬಗಳು ಧರೆಗುರುಳಿವೆ. ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಸಿಡಿಲಿಗೆ ಎರಡು ಕರುಗಳು ಸತ್ತಿವೆ. ಹೂವಿನಹಡಗಲಿ ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಭತ್ತದ ಫಸಲು ನೆಲಕಚ್ಚಿದೆ.

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪದಲ್ಲಿ ಎರಡು ಮನೆಗಳು ಬಿದ್ದಿದ್ದು, ಬಾಳೆ, ಸಪೋಟ, ಕಬ್ಬು ಬೆಳೆ ಸೇರಿದಂತೆ ನುಗ್ಗೆ, ಹೆಬ್ಬೇವು ಮರಗಳಿಗೆ ಹಾನಿಯಾಗಿದೆ. ಕುರುಗೋಡು, ಕಂಪ್ಲಿ ಭಾಗದ ಕೆಲವೆಡೆ ವಿದ್ಯುತ್‌ ಕಂಬಗಳು ಬಾಗಿದ್ದು, ಕಂಪ್ಲಿಯಲ್ಲಿ ಬಾಳೆ ನೆಲಕಚ್ಚಿದೆ. 

ಹುಬ್ಬಳ್ಳಿ– ಧಾರವಾಡ, ದಾಂಡೇಲಿ, ಬೆಳಗಾವಿ ನಗರ ಹಾಗೂ ಜಿಲ್ಲೆಯಾದ್ಯಂತ ಹಲವೆಡೆ ಮಳೆಯಾಗಿದೆ. ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣ ಸಮೀಪದ ಬೆಳಗಂಟಿ ಬಡಾವಣೆಯಲ್ಲಿ ಸಿಡಿಲು ಬಡಿದು 9 ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬಿಜೆಪಿ ಶ್ರೀಮಂತರ ಓಲೈಕೆ ರಾಜಕಾರಣ ಮಾಡುತ್ತಿದೆ: ಕಿಮ್ಮ‌ನೆ ರತ್ನಾಕರ

ಬಿಜೆಪಿಯಿಂದ ಶ್ರೀಮಂತರ ಓಲೈಕೆಯ ರಾಜಕಾರಣ ನಡೆಯುತ್ತಿದೆ‌. ಅದನ್ನು ತಡೆಯಬೇಕಿದೆ ಎಂದು ಮಾಜಿ...

ಬೆಂಗಳೂರು | ಬರೋಬ್ಬರಿ ₹67.5 ಕೋಟಿಗೆ ಸೇಲ್ ಆದ ಕೋರಮಂಗಲದ ನಿವೇಶನ

ರಾಜ್ಯ ರಾಜಧಾನಿ ಬೆಂಗಳೂರು ಅಭಿವೃದ್ಧಿ ಹೊಂದುತ್ತಿರುವ ನಗರ. ನಗರದಲ್ಲಿ ಒಂದು ಸ್ವಂತ...

ತುಮಕೂರು | ‘ದಲಿತರ ಸಂವಿಧಾನ’ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ

ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಬದಲಾವಣೆ ವಿಷಯ ಮಹತ್ವ ಪಡೆದುಕೊಂಡಿದೆ. ಸಂವಿಧಾನ ಬದಲಿಸುತ್ತೇವೆ...

ಬೆಂಗಳೂರು | ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ; ನ್ಯಾಯಕ್ಕಾಗಿ ರಾಷ್ಟ್ರಪತಿಗೆ ಕರವೇ ಮನವಿ

ಗೋವಾ ಕನ್ನಡಿಗರ ರಕ್ಷಣೆಗೆ ರಾಷ್ಟ್ರಪತಿಯರು ಮಧ್ಯೆ ಪ್ರವೇಶಿಸಿ ನ್ಯಾಯ ನೀಡಬೇಕು ಎಂದು...