ಮರ್ಯಾದೆ ಇದ್ದವರು ರಾಜಕಾರಣದಲ್ಲಿ ಇರಬಾರದು ಅನ್ನೋ ಪರಿಸ್ಥಿತಿ ಉಂಟಾಗಿದೆ. ಪ್ರಜಾಪ್ರಭುತ್ವಕ್ಕೆ ಕರ್ನಾಟಕ ಹೆಸರಾದಂತ ರಾಜ್ಯ. ಹಾಗಾಗಿ ಈ ಬಾರಿಯಾದರೂ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಚುನಾವಣೆ ನಡೆಯುತ್ತದೆಂದು ಹೇಳಬಹುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಕುಟುಂಬದೊಂದಿಗೆ ಬಂದು ಮತ ಚಲಾಯಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಲ್ಲೆಡೆ ಭ್ರಷ್ಟಾಚಾರ ಅತಿರೇಕಕ್ಕೇರಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಅನೈತಿಕ ಕೆಲಸಗಳು ನಡೆಯುವುದು ಒಳ್ಳೆಯದಲ್ಲ. ಕಳೆದ ಒಂದು ತಿಂಗಳಿಂದ ಭ್ರಷ್ಟಾಚಾರ ಇನ್ನೂ ಮಿತಿಮೀರಿದೆ. ಕಾನೂನು ಮಾಡುವವರು ಮತ್ತು ರಾಜ್ಯ ಆಳುವಂತಹವರು ಎಂಥವರಿರಬೇಕು ಎಂಬುದನ್ನು ಜನ ನಿರ್ಧಾರ ಮಾಡುತ್ತಾರೆ” ಎಂದು ಹೇಳಿದರು.
“ಒಂದು ವೋಟಿಗೆ ₹5000 ಕೊಟ್ಟಿದ್ದಾರೆಂದು ಯಾರೋ ಹೇಳುತ್ತಿದ್ದರು. ಲೆಕ್ಕ ತೆಗೆದರೆ ದಿನಕ್ಕೆ ಒಂದೂವರೆ ರೂ. ಆಯ್ತು ಅಷ್ಟೇ. ಇದಕ್ಕಿಂತ ಮರ್ಯಾದೆ ಹೋಗುವಂತದ್ದು ಇನ್ನೇನು ಬೇಕು. ಸರಿಯಾಗಿ ಕೆಲಸ ಮಾಡಿದರೆ ಹಣ ಹಂಚುವ ಅಗತ್ಯವಿಲ್ಲ. ಯಾರಮೇಲೆ ಯಾರೂ ಡಿಪೆಂಡ್ ಆಗಬಾರದು. ಈ ಬಾರಿ ಪ್ರಜಾಪ್ರಭುತ್ವದಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು” ಎಂದು ಕರೆ ನೀಡಿದರು.
“ಯಾವುದೇ ಅಭ್ಯರ್ಥಿಗಳು ಜನರಿಗೆ ಹಣದ ಆಮಿಷವೊಡ್ಡಿದ್ದರೂ ಕೂಡ ಮತದಾರರು ಈ ಬಾರಿ ಯೋಗ್ಯರಿಗೆ ಮತ ನೀಡುತ್ತಾರೆಂದು ನಾನು ನಂಬಿದ್ದೇನೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಪಕ್ಷದ ಅಮಲು, ಭ್ರಷ್ಟಾಚಾರ ಎನ್ನುವಂಥದ್ದು ಪರಾಕಾಷ್ಟೆಗೆ ಹೋಗುತ್ತಿದೆ. ಹಾಗೆ ಹೋಗಬಾರದು. ಸರ್ಕಾರ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳಬೇಕು. ಆದರೆ, ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಆದರೂ, ಇದನ್ನು ಬಿಡಿಸುವುದು ಸುಲಭವೇನಲ್ಲ ಅನಿಸುತ್ತದೆ. ಭ್ರಷ್ಟಾಚಾರದಲ್ಲಿ ಸಿಕ್ಕವರನ್ನು ಗೊತ್ತುಮಾಡಿ, ಕಠಿಣ ಶಿಕ್ಷೆ ವಿಧಿಸಿ, ಸಾರ್ವಜನಿಕರಿಗೆ ತಿಳಿಸಬೇಕು. ಇಲ್ಲವಾದಲ್ಲಿ ಯಾರೇನು ಅಕ್ರಮ ಮಾಡುತ್ತಾರೆಂಬುದು ಸಾರ್ವಜನಿಕವಾಗಿ ಗೊತ್ತಾಗುವುದಿಲ್ಲ” ಎಂದರು.
“ಕೆಲವು ದಿನಗಳಲ್ಲಿ ಐಟಿ ದಾಳಿ ಆಯ್ತು, ಯಾರ ಮೇಲೆ ಆಯ್ತು, ಆ ಹಣ ಎಲ್ಲಿಂದ ಬಂತು, ಏನಾಯ್ತು ಎಂಬುದನ್ನು ಪತ್ತೆಹಚ್ಚಿ, ಅವರನ್ನು ಅವರ ಅಕ್ರಮಗಳನ್ನು ಸಾಮಾನ್ಯ ಜನರಿಗೂ ಪರಿಚಯಿಸಬೇಕು” ಎಂದು ತಿಳಿಸಿದರು.
“1980ರ ಕಾಲದಲ್ಲಿ ನಾನು ರಾಜಕೀಯಕ್ಕೆ ಕಾಲಿಟ್ಟಾಗ ಯಾವುದೇ ದ್ವೇಷದ ರಾಜಕಾರಣ ಇರಲಿಲ್ಲ. ಹೆಗಲ ಮೇಲೆ ಕೈ ಹಾಕ್ಕೊಂಡು ಸ್ನೇಹಿತರಂತೆ ಇರುತ್ತಿದ್ದೆವು. ಅವತ್ತಿನ ರಾಜಕಾರಣ ಬೇರೆ, ಇಂದಿನ ರಾಜಕಾರಣ ಬೇರೆ. ಒಟ್ಟಾರೆ ರಾಜಕಾರಣ ಕುಲಗೆಟ್ಟಿದೆ. ಅದನ್ನು ಸುಧಾರಣೆ ಮಾಡುವಂಥದ್ದೆಲ್ಲ ಮಾಧ್ಯಮದವರ ಕೈಯಲ್ಲೇ ಇದೆ” ಎಂದರು.
“ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸುವ, ಚಿಂತಿಸುವ ಬದಲಾಗಿ ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಟೀಕೆ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಬೇಕು” ಎಂದು ತಿಳಿಸಿದರು.
“ಭಾರತದ ಪ್ರಜಾಪ್ರಭುತ್ವ ಇಡೀ ಜಗತ್ತಿನಲ್ಲಿಯೇ ಮಹತ್ವದ್ದಾಗಿದೆ. ಹಾಗಾಗಿ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಎಲ್ಲರೂ ಪ್ರಾಮಾಣಿಕ ಕೆಲಸ ಮಾಡಬೇಕು” ಎಂದು ಸಂದೇಶ ನೀಡಿದರು.