ಐಪಿಎಲ್ ಟೂರ್ನಿಗೆ ಭಾನುವಾರ ತೆರೆ ಬೀಳಲಿದೆ. ಕಳೆದ ಎರಡು ತಿಂಗಳಿನಿಂದ ಹಲವು ಪಂದ್ಯಗಳು ನಡೆದಿವೆ. ಈ ವೇಳೆ, ಹಲವಡೆಗೆ ತಂಡಗಳ ಪರವಾಗಿ ಬೆಟ್ಟಿಂಗ್ ಹಲವರು ಬೆಟ್ಟಿಂಗ್ ದಂಧೆಯಲ್ಲಿ ಪಾಲ್ಗೊಂಡಿರುವ ವರದಿಗಳೂ ಆಗಿವೆ. ಇದೇ ಬೆಟ್ಟಿಂಗ್ ಭೂತಕ್ಕೆ ಮಂಡ್ಯ ಜಿಲ್ಲೆಯ ಯುವಕನೊಬ್ಬ ಶನಿವಾರ ಬಲಿಯಾಗಿದ್ದಾನೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಯುವಕ ಪುನೀತ್ ಬೆಟ್ಟಿಂಗ್ನಿಂದ ಹತ್ಯೆಗೀಡಾದ ದುರ್ದೈವಿ. ಬೆಟ್ಟಿಂಗ್ನಲ್ಲಿ ತನ್ನ ಸ್ನೇಹಿತ ಗೆದಿದ್ದ ಹಣ ಕೇಳಿದ್ದಕ್ಕಾಗಿ ದುರುಳರು ಈತನನ್ನು ಹೊಡೆದು ಕೊಂದಿದ್ದಾರೆ.
ಮಂಗಳವಾರ ಗುಜರಾತ್ ಮತ್ತು ಚೆನ್ನೈ ತಂಡಗಳ ನಡುವೆ ಕ್ವಾಲಿಫಯರ್ ಪಂದ್ಯವಿತ್ತು. ಪುನೀತ್ ಸ್ನೇಹಿತ ದರ್ಶನ್ ಎಂಬಾತ, ಮತ್ತೊಬ್ಬ ಸ್ನೇಹಿತ ಶರತ್ ಬಳಿ ಬೆಟ್ಟಿಂಗ್ ಕಟ್ಟಿದ್ದ. ದರ್ಶನ್ ಚೆನ್ನೈ ಪರವಾಗಿಯೂ, ಶರತ್ ಗುಜರಾತ್ ಪರವಾಗಿಯೂ 11,000 ರೂ. ಬೆಟ್ ಕಟ್ಟಿದ್ದರು. ಆ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸಿತ್ತು.
ಚೆನ್ನೈ ಗೆದ್ದಿದ್ದರಿಂದ ಬೆಟ್ಟಿಂಗ್ ಗೆದ್ದ ದರ್ಶನ್, ತಾನು ಗೆದ್ದ ಹಣ ನೀಡುವಂತೆ ಶರತ್ ಬಳಿ ಕೇಳಿದ್ದಾನೆ. ಹಣ ಕೊಡಲು ಆತ ನಿರಾಕರಿಸಿದ್ದು, ಇಬ್ಬರ ನಡುವೆ ಗಲಾಟೆ ನಡೆಸಿದೆ. ಬಳಿಕ, ಪುನೀತ್ ಬಳಿ ಬಂದ ದರ್ಶನ್ ತಾನು ಗೆದ್ದ ಹಣವನ್ನು ಶರತ್ ಕೊಟ್ಟಿಲ್ಲವೆಂದು ದೂರು ಹೇಳಿದ್ದಾನೆ.
ಈ ಸುದ್ದಿ ಓದಿದ್ದೀರಾ?: ಆರ್ಎಸ್ಎಸ್ ಎಂಬ ವಿಚ್ಛಿದ್ರಕಾರಿ ಸಂಘಟನೆ ಮೂರು ಬಾರಿ ನಿಷೇಧಕ್ಕೊಳಪಟ್ಟಿತ್ತು: ಕಟೀಲ್ಗೆ ಕಾಂಗ್ರೆಸ್ ತಿರುಗೇಟು
ಸಿಟ್ಟಾದ ಪುನೀತ್, ತನ್ನ ಸ್ನೇಹಿತನೊಂದಿಗೆ ಶರತ್ ಬಳಿ ಹೋಗಿ ಪಂಚಾಯತಿ ನಡೆಸಿದ್ದಾರೆ. ಈ ವೇಳೆ, ಮತ್ತೆ ಗಲಾಟೆ ನಡೆದು ಶರತ್ ಮತ್ತಾತನ ಸಹಚರರು ದೊಣ್ಣೆಯಿಂದ ಪುನೀತ್ ತಲೆ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ತಲೆಗೆ ಗಂಭೀರ ಪೆಟ್ಟು ಬಿದ್ದ ಪರಿಣಾಮ ಪುನೀತ್ ಕುಸಿದು ಬಿದ್ದಿದ್ದಾನೆ. ಆತನನ್ನು ಆಸ್ಪತ್ರೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಶರತ್ ಮತ್ತು ಆತನ ಸ್ನೇಹಿತರನ್ನು ಬಂಧಿಸಿದ್ದಾರೆ.