- ʼಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕುʼ
- ʼಯಾವುದೇ ಕೊಡುಗೆ ನೀಡದ ದೇವರುಗಳನ್ನು ಮನೆಯಲ್ಲಿಟ್ಟು ಪೂಜಿಸುತ್ತಿದ್ದೇವೆʼ
ಸ್ವತಂತ್ರ ಭಾರತದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ (ಆರ್ಬಿಐ) ಸ್ಥಾಪನೆ, ಹಿರಾಕುಡ್ ಆಣೆಕಟ್ಟು ನಿರ್ಮಾಣ ಸೇರಿದಂತೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನಿರ್ಮಾಣಕ್ಕೆ ಬುನಾದಿ ಹಾಕಿದ ಆಧುನಿಕ ಭಾರತದ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಮಾಡಗಿರಿ ಸ.ಪ್ರೌ.ಶಾಲೆ ಕನ್ನಡ ಶಿಕ್ಷಕ ಇಸ್ಮಾಯಿಲ್ ಪಿ.ತಳಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಬಾಗಲವಾಡ ಗ್ರಾಮದ ಜೈ ಭೀಮ್ ನಗರದ ಈರಮ್ಮ – ಬಸವರಾಜ ಸಾಲ್ಮನಿ ಅವರ ಹೊಸ ಮನೆಯ ಗೃಹ ಪ್ರವೇಶ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ‘ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ದಸಂಸ ಮಹಾ ಪೋಷಕ ಎಂ.ಆರ್.ಭೇರಿ ಮಾತನಾಡಿ, “ಸಮಾಜದಲ್ಲಿ ದಲಿತ, ಹಿಂದುಳಿದ, ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಶಿಕ್ಷಣ, ಸಂಪತ್ತು, ಅಧಿಕಾರ ಸೇರಿದಂತೆ ಗೌರವಯುತ ಬದುಕು ನಡೆಸಲು ನಿರಾಕರಿಸಿದವರ ವಿರುದ್ಧ ಹೋರಾಟ ನಡೆಸಿದ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಮನೆಯಲ್ಲಿ, ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು. ನಮಗೆ ಯಾವುದೇ ಕೊಡುಗೆ ನೀಡದ ದೇವರುಗಳನ್ನು ಮನೆಯಲ್ಲಿಟ್ಟು ಪೂಜಿಸುತ್ತಿದ್ದೇವೆ. ಶಿಕ್ಷಣ ಪಡೆದ ಪ್ರಜ್ಞಾವಂತರೆಲ್ಲರೂ ಯೋಚಿಸಬೇಕಿದೆ,” ಸಲಹೆ ನೀಡಿದರು.
ಅಣದೂರಿನ ಬುದ್ಧವಿಹಾರ ಬೀದರ್ನ ಭಂತೇಜಿ ಧಮ್ಮದೀಪ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಗ್ರಾ.ಪಂ.ಸದಸ್ಯರು ಹಾಗೂ ಹಿರಿಯ ಹೋರಾಟಗಾರ ಪಿ.ತಿಪ್ಪಣ್ಣ ಬಾಗಲವಾಡ, ಕಲ್ಲೂರು ಪ್ರಬುದ್ಧ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗಂಗಾಧರ ಹಿಂದಿನಮನೆ ಬಾಗಲವಾಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ದಲಿತ ಪ್ಯಾಂಥರ್ ರಾಯಚೂರು ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೇಕಲ್, ಛಲವಾದಿ ಮಹಾಸಭಾ ಸಿರವಾರ ತಾಲೂಕಾಧ್ಯಕ್ಷ ಶಿವರಾಜ ಉಮಳಿಹೋಸೂರು ಸೇರಿದಂತೆ ಇತರರು ಇದ್ದರು.