ಸಿದ್ಧರಾಮಯ್ಯ ನೇತೃತ್ವದ ನೂತನ ಸರ್ಕಾರವು ರಾಜ್ಯದಲ್ಲಿ ಆಯಾ ಜಿಲ್ಲೆಯಿಂದ ಶಾಸಕರಾಗಿ, ಮಂತ್ರಿಗಳಾಗಿರುವವರನ್ನೇ ಆ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಒತ್ತಾಯಿಸಿದ್ದಾರೆ.
“ವಿಶೇಷವಾಗಿ ಹಿಂದುಳಿದ 371(ಜೆ) ಕಲಂ ಸಂವಿಧಾನದ ವಿಶೇಷ ಸ್ಥಾನವಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಕಲ್ಯಾಣಕ್ಕಾಗಿ ಆಯಾ ಜಿಲ್ಲೆಗಳ ಸಚಿವರನ್ನೇ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನಾಗಿ ನೇಮಿಸಬೇಕು.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬಹುತೇಕ ಜಿಲ್ಲೆಗಳಿಗೆ ಬೇರೆ ಭಾಗದ ಸಚಿವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದರು. ಇದರಿಂದ ಅಭಿವೃದ್ಧಿ ಕಾರ್ಯಗಳು ನಡೆಯದೆ, ಪ್ರಗತಿ ಪರಿಶೀಲನೆ ಸಭೆಗಳೂ ನಿರಂತರವಾಗಿ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿತ್ತು” ಎಂದು ಆರೋಪಿಸಿದರು.
“ಬೀದರ್ ಜಿಲ್ಲೆ ಸೇರಿದಂತೆ ಕಲ್ಯಾಣದ ಆನೇಕ ಜಿಲ್ಲೆಗಳಲ್ಲಿ 15ನೇ ಆಗಸ್ಟ್, 17ನೇ ಸೆಪ್ಟೆಂಬರ್ನಂತಹ ರಾಷ್ಟ್ರೀಯ ಹಬ್ಬ ಮತ್ತು ನಾಡಹಬ್ಬದಂದು ಉಸ್ತುವಾರಿ ಸಚಿವರು ಭಾಗವಹಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದರು” ಎಂದು ಹೇಳಿದರು.
“ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಕಾರ್ಯಕ್ರಮ ಸೇರಿದಂತೆ ಇತರೆ ಅಧಿಕೃತ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಿದ್ದರು. ಬೇರೆ ಜಿಲ್ಲೆಯ ಸಚಿವರ ನೇಮಕದಿಂದ ಅಭಿವೃದ್ಧಿ ಕುಂಠಿತವಾಗುವದಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರಾಜ್ಯಮಟ್ಟದಲ್ಲಿ ನಾಯಕತ್ವವೂ ಬೆಳೆಯುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಿ; ಪ್ರಭು ಚವ್ಹಾಣ ಸೂಚನೆ
“ಹಿಂದಿನ ಸರ್ಕಾರದ ಪ್ರಯೋಗದ ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ಆಯಾ ಜಿಲ್ಲಾ ಸಚಿವರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ, 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ, ನಮ್ಮ ಪಾಲಿನ ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿದಂತೆ ಈ ಭಾಗದ ಎಲ್ಲ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನೂತನ ಸರ್ಕಾರ ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿ, ಆಯಾ ಜಿಲ್ಲೆಯ ಸಚಿವರನ್ನೇ ಜಿಲ್ಲೆಯ ಉಸ್ತುವಾರಿ ನೀಡಬೇಕು” ಎಂದು ಸಮಿತಿ ಪರವಾಗಿ ಆಗ್ರಹಿಸಿದ್ದಾರೆ.