ಗರ್ಭಿಣಿ ಆನೆಯನ್ನು ಇಬ್ಬರು ದುರುಳರು ಗುಂಡಿಕ್ಕಿ ಕೊಂದು ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ರಾಸಲ್ಪುರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಆರೋಪಿಗಳು ಎಸ್ಟೇಟ್ ಮಾಲೀಕರಾಗಿದ್ದಾರೆ. ಇಬ್ಬರೂ ಪರಾರಿಯಾಗಿದ್ದಾರೆ. ಅನೆಯನ್ನು ಗುಂಡಿಕ್ಕಿ ಕೊಂದಾಗ ಅವರು ಮದ್ಯ ಸೇವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
“ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸುಮಾರು 20 ವರ್ಷ ವಯಸ್ಸಿನ ಆನೆ ತನ್ನ ಮರಿಗೆ ಜನ್ಮ ನೀಡುವ ಸನಿಹದಲ್ಲಿತ್ತೆಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ” ಎಂದು ಹೇಳಿದ್ದಾರೆ.
“ಕುಂಜಿಲಂಡ ಜಗದೀಶ್ ಎಂಬುವವರಿಗೆ ಸೇರಿದ ಎಸ್ಟೇಟ್ನಲ್ಲಿ ಭಾನುವಾರ ಬೆಳಗ್ಗೆ ಗರ್ಭಿಣಿ ಆನೆಯ ಶವ ಪತ್ತೆಯಾಗಿದೆ. ಕುಶಾಲನಗರ ಅರಣ್ಯ ಇಲಾಖೆ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳದಲ್ಲಿ ಖಾಲಿ ಬುಲೆಟ್ ಕವಚಗಳು ಕಂಡುಬಂದಿವೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಆನೆಗೆ ಗುಂಡು ತಗುಲಿರುವ ಗಾಯಗಳಾಗಿವೆ. ಬಲ ಕಿವಿಯನ್ನು ಹೊಕ್ಕಿ ಮೆದುಳನ್ನು ಪ್ರವೇಶಿಸಿದ ಗುಂಡಿನಿಂದ ಗಂಭೀರ ಗಾಯವಾಗಿತ್ತು. ಆನೆಯ ದೇಹದ ತುಂಬಾ ಗುಂಡು ತಗುಲಿರುವ ಸಣ್ಣ ಗುರುತುಗಳು ಕಂಡುಬಂದಿವೆ” ಎಂದು ಆರ್ಎಫ್ಒ ಶಿವರಾಮ್ ದೃಢಪಡಿಸಿದ್ದಾರೆ.
“ಅಧಿಕಾರಿಗಳು ಶ್ವಾನದಳವನ್ನು ಘಟನಾ ಸ್ಥಳಕ್ಕೆ ಕರೆತಂದಿದ್ದಾರೆ. ಬಳಿಕ ಶ್ವಾನದಳ, ಅಧಿಕಾರಿಗಳನ್ನು ಇಬ್ಬರು ಎಸ್ಟೇಟ್ ಮಾಲಿಕರ ನಿವಾಸಗಳಿಗೆ ಕರೆದೊಯ್ದಿದೆ.
“ಆರೋಪಿಗಳಲ್ಲಿ ಒಬ್ಬನಾದ ಕುಂಜಿಲಂಡ ಜಗದೀಶ್ ಅವರ ಮನೆಗೆ ಶ್ವಾನದಳ ನಮ್ಮನ್ನು ಕರೆದೊಯ್ದಿದ್ದು, ಬಳಿಕ ಡಿಂಪಲ್ ಒಡೆತನದ ಪಕ್ಕದ ಎಸ್ಟೇಟ್ಗೆ ಕರೆದೊಯ್ದವು. ಅಲ್ಲಿ ಖಾಲಿ ಬುಲೆಟ್ ಕೇಸಿಂಗ್ಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಶಿವರಾಂ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ದುರುಳರ ಗುಂಡೇಟಿಗೆ ಕಾಡಾನೆ ಬಲಿ
“ಎಸ್ಟೇಟ್ ಮಾಲೀಕ ಆರೋಪಿ ಜಗದೀಶ್ ಮತ್ತು ಡಿಂಪಲ್ ಇಬ್ಬರೂ ಪರಾರಿಯಾಗಿದ್ದು, ಅವರ ಮನೆಗಳಿಂದ ಬಂದೂಕುಗಳೂ ಕಾಣೆಯಾಗಿವೆ” ಎಂದು ತಿಳಿಸಿದ್ದಾರೆ.
“ಇಬ್ಬರು ಆರೋಪಿಗಳನ್ನು ಬಂಧಿಸಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದೆ. ಆರೋಪಿಗಳ ವಿರುದ್ಧ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲಿಸಿದ್ದಾರೆ” ಎಂದು ತಿಳಿದುಬಂದಿದೆ.
ಸತ್ತ ಮರಿಯನ್ನು ಆನೆಯ ಗರ್ಭದಿಂದ ತೆಗೆದು ಎರಡೂ ಶವಗಳನ್ನು ಹೂಳಲಾಯಿತು.