ಕೋಲಾರದ ರಹಮತ್ ನಗರದಲ್ಲಿ ಗುರುವಾರ ರಾತ್ರಿ ಬೀದಿನಾಯಿಗಳು ಬಾಲಕನನ್ನು ಅಟ್ಟಾಡಿಸಿ ಗಾಯಗೊಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕನಿಗೆ ತೀವ್ರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ರಹಮತ್ ನಗರದ ಬಾಬು ಎಂಬುವರ ಪುತ್ರ ಜಾಫರ್(9)ನನ್ನು ಪೊಲೀಸರು ರಕ್ಷಿಸಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಕುತ್ತಿಗೆ, ಕಿವಿ, ಎದೆ, ಬೆನ್ನು ಹಾಗೂ ತೊಡೆಗೆ ತೀವ್ರ ಗಾಯವಾಗಿದ್ದು, ಬಾಲಕ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
“ಗುರುವಾರ ರಾತ್ರಿ ಐದಾರು ನಾಯಿಗಳು ಬಾಲಕನ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ 112 ವಾಹನದಲ್ಲಿ ಗಸ್ತಿನಲ್ಲಿದ್ದ ಕಾನ್ಸ್ಪೆಬಲ್ ಎಚ್.ರಾಜಣ್ಣ ನಾಯಿಗಳನ್ನು ಓಡಿಸಿ ಮಗುವನ್ನು ಜಿಲ್ಲಾಸ್ಪತ್ರೆಗೆ ಸೇರಿದ್ದಾರೆ. ಬಾಲಕ ಅಪಾಯದಿಂದ ಪಾರಾಗಿದ್ದಾನೆ” ಎಂದು ಗಲ್ಪೇಟೆ ಪಿಎಸ್ಐ ಅರುಣ್ ಗೌಡ ಪಾಟೀಲ್ ತಿಳಿಸಿದ್ದಾರೆ. ಕಾನ್ಸ್ಟೆಬಲ್ ರಾಜಣ್ಣ ಹಾಗೂ ವಾಹನದ ಚಾಲಕ ಡಿಎಆರ್ನ ಮಂಜುನಾಥ್ ಶೆಟ್ಟಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
“ರಾತ್ರಿ ವಾಹನದಲ್ಲಿ ಶ್ರೀನಿವಾಸಪುರ ವೃತ್ತದಿಂದ ಅರಹಳ್ಳಿ ಕಡೆ ಗಸ್ತು ತಿರುಗುವಾಗ ಕಿರುಚಿದ ಶಬ್ದ ಬಂತು. ಅದೇ ರಸ್ತೆಯಲ್ಲಿ ಮುಂದೆ ಹೋಗಿದ್ದೆವು. ಶಬ್ದ ಏನಿರಬಹುದೆಂದು ಕುತೂಹಲದಿಂದ ಹಿಂತಿರುಗಿ ಬಂದೆವು” ಎಂದು ಕಾನ್ಸ್ಟೆಬಲ್ ರಾಜಣ್ಣ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆನೆ ‘ಸುವರ್ಣ’ಗೆ ಸಿಸೇರಿಯನ್ ಹೆರಿಗೆ; ಗರ್ಭದಲ್ಲೇ ಮೃತಪಟ್ಟಿದ್ದ ಮರಿ
“ನಾಯಿಗಳು ಬಾಲಕನ ಬಟ್ಟೆ ಹರಿದು ಹಾಕಿದ್ದವು. ಕುತ್ತಿಗೆಯಿಂದ ರಕ್ತ ಬರುತಿತ್ತು. ತಕ್ಷಣವೇ ಆತನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದೆವು. ಬಳಿಕ ರಾತ್ರಿ ಕರ್ತವ್ಯದಲ್ಲಿದ್ದ ಡಾ.ಕೆ.ಎಂ ವರ್ಣಶ್ರೀ ಬಾಲಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಶುಕ್ರವಾರ ಬೆಳಿಗ್ಗೆ ಬಾಲಕನಿಗೆ ಪ್ರಜ್ಞೆ ಬಂದಿದೆ. ತಂದೆ ಹೆಸರು, ಮನೆ ವಿಳಾಸ, ಮೊಬೈಲ್ ಸಂಖ್ಯೆ ನೀಡಿದ್ದಾನೆ” ಎಂದು ರಾಜಣ್ಣ ತಿಳಿಸಿದರು.
ಬಾಲಕ ರಕ್ಷಣೆ ವೇಳೆ ಕಾನ್ಸ್ಟೆಬಲ್ ರಾಜಣ್ಣ ಅವರ ಮೇಲೂ ನಾಯಿಗಳು ದಾಳಿ ನಡೆಸಿವೆ. ಲಾಟಿ ಹಾಗೂ ಕಲ್ಲಿನ ಸಹಾಯದಿಂದ ಬೀದಿನಾಯಿಗಳನ್ನು ಓಡಿಸಿದ್ದಾರೆ.