- ಸರ್ಕಾರದ ವತಿಯಿಂದ 5 ಲಕ್ಷ ರೂಪಾಯಿ ಪರಿಹಾರ
- ಏ. 25ರಂದು ಸಿಡಿಲು ಬಡಿದು ಮೃತಪಟ್ಟಿದ್ದ ಮಹಿಳೆ
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಶ್ಯಾಡಲಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದ ಮಹಿಳೆಯ ಮನೆಗೆ ತೆರಳಿ ಕುಟುಂಬದವರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು 5 ಲಕ್ಷ ರೂ.ಪರಿಹಾರ ವಿತರಿಸಿ, ಸಾಂತ್ವನ ಹೇಳಿದ್ದಾರೆ.
ಏಪ್ರಿಲ್ 25 ರಂದು ಆಲಿಕಲ್ಲು ಮಳೆ ಸುರಿದಿತ್ತು. ಈ ವೇಳೆ ಶಾಂತವ್ವ ಅವರು ಸಿಡಿಲು ಬಡಿದು ಮೃತಪಟ್ಟಿದ್ದರು. ವಿಷಯ ತಿಳಿದ ಜಿಲ್ಲಾಧಿಕಾರಿಗಳು ಏ.26ರಂದು ಮೃತರ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದಾರೆ. ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಸರಿಯಾಗಿ ಆರೈಕೆ ಮಾಡುವಂತೆ ಕುಟುಂಬದ ಹಿರಿಯರಿಗೆ ಸಲಹೆ ನೀಡಿದ್ದಾರೆ.
ನಂತರ, ಸುದ್ದಿಗಾರರೊಂದಿಗೆ ಮಾತನಾಡಿ, “ಸಿಡಿಲು ಬಡಿದು ಮೃತಪಟ್ಟ ಮಹಿಳೆ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಕೇವಲ 24 ಗಂಟೆಗಳ ಒಳಗೆ ನೀಡಲಾಗಿದೆ. ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಲಾಗಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಹರಿಸಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?: ಬೇಡಿಕೆ ಮೇರೆಗೆ ಕೇರಳದ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ
“ಮುಂಬರುವ ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಂಭವ ಇದೆ. ಮಳೆಯಿಂದಾಗಿ ಮಾನವ ಜೀವ ಹಾನಿ ಮತ್ತು ಜಾನುವಾರುಗಳ ಪ್ರಾಣ ಹಾನಿ, ಬೆಳೆ ಹಾನಿ, ಮನೆಗಳು ಹಾನಿಯಾಗಿದ್ದಲ್ಲಿ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಲು ಕ್ರಮವಹಿಸಬೇಕು” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.