- ಶಿರೂರು ಪಂಚಾಯತಿಯಲ್ಲಿ ಬೆಳೆವಿಮೆಗೆ ಕನ್ನ
- ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ರೈತರು
‘ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆ ಅಡಿ’ಯಲ್ಲಿ ರೈತರಿಗೆ ಬಿಡುಗಡೆಯಾಗಿದ್ದ ಹಣವನ್ನು ಶಿರೂರು ಪಂಚಾಯತಿ ಪಿಡಿಒ ಮತ್ತು ವಿಮಾ ಕಂಪನಿ ಸೇರಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆಯ ರೈತರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಶಿರೂರು ಪಂಚಾಯತಿಯ ಪಿಡಿಓ ಶರಣಪ್ಪ ವಿರುದ್ಧ ಆರೋಪ ಕೇಳಿಬಂದಿದ್ದು, “ಶರಣಪ್ಪ ಅವರು ಬೆಳೆ ವಿಮಾ ಕಂಪನಿಯವರಿಗೆ ಕೋಟ್ಯಂತರ ರೂಪಾಯಿ ಲಾಭ ಮಾಡಿಕೊಡಲು ರೈತರು ಬೆಳೆದ ಬೆಳೆಯಲ್ಲಿ 80% ಇಳುವರಿ ಬಂದಿದೆ ಎಂದು ವಿಮಾ ಕಂಪನಿಯವರಿಗೆ ಬರೆದುಕೊಟ್ಟು ಮೋಸ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಪಿಡಿಒ ನಿರ್ಧಾರ ಖಂಡಿಸಿ ರೈತರ ಹಕ್ಕು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ ಹಾಗೂ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್. ಹೂಗಾರ ನೇತೃತ್ವದಲ್ಲಿ ಖಂಡಿಸಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಹೇಶಪ್ಪ ಹಡಪದ ಮಾತನಾಡಿ, “ಕುಕನೂರು ತಾಲೂಕಿನ ಯರೇಹಂಚಿನಾಳ, ಬಿನ್ನಾಳ, ಸಿದ್ನಕೊಪ್ಪ, ಸೋಂಪೂರ, ಮಂಡಲಗೇರಿ, ರಾಜೂರು ಪಂಚಾಯಿತಿ ಸೇರಿದಂತೆ ಶೀರೂರ ಗ್ರಾಮ ಪಂಚಯತಿ ವ್ಯಾಪ್ತಿಗೆ ಬರುವ ಅನೇಕ ಗ್ರಾಮದ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಖಾಸಗಿ ಕಂಪನಿಯವರು ರೈತರಿಗೆ ಮೊಸ ಮಾಡುತ್ತಾ ಬಂದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಯಶವಂತಪುರ ಕ್ಷೇತ್ರ | ತೆನೆ ಪಕ್ಷದ ಅನುಕಂಪದ ಅಲೆಯಲ್ಲಿ ಕೊಚ್ಚಿ ಹೋಗುವುದೇ ಕಮಲ!
“ಶಿರೂರು ಪಂಚಾಯತಿ ವ್ಯಾಪ್ತಿಗೆ ಬರುವ ರೈತರಿಗೆ 2023ನೇ ಸಾಲಿನ ಬೆಳೆವಿಮೆ ಬರದಿದ್ದರೆ, ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಮತ ಬಹಿಷ್ಕಾರ ಮಾಡುವದಾಗಿ ಹಾಗೂ ಹೊಸ ಸರ್ಕಾರ ರಚನೆ ಆದ ನಂತರ ಕೊಪ್ಪಳ ಜಿಲ್ಲಾ ಆಡಳಿತ ಭವನದ ಮುಂದೆ ಉಗ್ರ ಹೋರಾಟವನ್ನು ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಮುಖಂಡ ನೀಲಪ್ಪ ಬೆದವಟ್ಟಿ, ಮಲ್ಲಿಕಾರ್ಜುನಯ್ಯ ಗುತ್ತುರ, ಶರಣಬಸಪ್ಪ ಚಪ್ಪರದ, ಶಿದ್ದಪ್ಪ ಪೊಲೀಸ್ ಪಾಟೀಲ್, ಹನುಮಪ್ಪ ಗುರಿಕಾರ, ಪರಸಪ್ಪ ಸಂಗನಾಳ, ಶೇಕಣ್ಣ ಮಾದಿನೂರ, ಮಾರುತಿ ಕಲಬುರ್ಗಿ, ಅಶೋಕ ಕಲಬುರ್ಗಿ, ಪರಶುರಾಮ್, ದೇವಪ್ಪ, ಸಿದ್ದಲಿಂಗಪ್ಪ, ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.