- ವಿ ಪಿ ಕುಲಕರ್ಣಿ ಅವರ ಬದುಕಿನ ಕುರಿತು ಮಗ ನಿಖಿಲ ಕುಲಕರ್ಣಿ ಬರಹ
- ಬಾಲಕನಿದ್ದಾಗಲೇ ತಂದೆ ತಾಯಿ ಕಳೆದುಕೊಂಡು ಹೋರಾಟಕ್ಕೆ ದುಮುಕಿದ್ದರು
ಬೆಳಗಾವಿ ಜಿಲ್ಲೆಯ ಕಾರ್ಮಿಕರ ನಾಯಕ, 17ನೇ ವಯಸ್ಸಿನಲ್ಲಿಯೇ ಮುಖ್ಯಮಂತ್ರಿಯ ಕುತ್ತಿಗೆ ಪಟ್ಟಿ ಹಿಡಿದು ಪ್ರಶ್ನಿಸಿದ್ದ ವಿ.ಪಿ ಕುಲಕರ್ಣಿ(70) ನಿಧನರಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಶುಕ್ರವಾರ ಮುಂಜಾನೆ ಅವರ ಸ್ವಗ್ರಾಮ ಮುದೇನಕೊಪ್ಪದಲ್ಲಿ ಕೊನೆಯುಸಿರೆಳೆದಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನಕೊಪ್ಪದಲ್ಲಿ ಜನಿಸಿದ ವಿ.ಪಿ ಕುಲಕರ್ಣಿ ಪ್ರಜಾಸತ್ತಾತ್ಮಕ ಹೋರಾಟ ಪ್ರಾರಂಭಿಸಿದ್ದರು. ದುಡಿಯುವ ಜನರಿಗೆ ಧ್ವನಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ರೈತ ಕಾರ್ಮಿಕರ ಪರ ನಿರಂತರ ಹೋರಾಟ ನಡೆಸಿದ್ದರು.
ಶ್ರೀಮಂತರ ಬದುಕು, ಬಡವರ ಬದುಕಿನ ನಡುವಿನ ಅಗಾಧ ವ್ಯತ್ಯಾಸ ಅವರನ್ನು ಬಾಲ್ಯದಿಂದಲೇ ಬಹುವಾಗಿ ಕಾಡಲಾರಂಭಿಸಿತ್ತು. ಅಸಮಾನತೆಯ ವಿರುದ್ಧದ ಧ್ವನಿ ಅವರ ಆಂತರ್ಯದಲ್ಲಿ ಮೊಳಗಲು ಶುರು ಮಾಡಿತ್ತು. ಮಾರ್ಕ್ಸ್, ಲೆನಿನ್, ಭಗತ್ ಸಿಂಗ್ ಅವರ ಚಿಂತನೆಗಳಿಂದ ಅವರು ಪ್ರಭಾವಿತರಾಗಿದ್ದರು. 15ನೇ ವಯಸ್ಸಿಗೆ ಧಾರವಾಡದ ಟೈವಾಕ್ ಕಂಪನಿಯಲ್ಲಿ ಕಾರ್ಮಿಕನಾಗಿ ಅವರು ಸೇರಿದ್ದರು. ಎಡ ಚಿಂತನೆಗಳಿಗೆ ಆಕರ್ಷಿತಗೊಂಡು, ಎಡ ಕಾರ್ಮಿಕ ಸಂಘಟನೆಯ ಸದಸ್ಯರಾದ ಅವರು 17ನೇ ವಯಸ್ಸಿನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿಯ ಕೊರಳು ಪಟ್ಟಿ ಹಿಡಿದು ಎಳೆದು ಬಿಟ್ಟಿದ್ದರು. ಅದಕ್ಕಾಗಿ ಜೈಲಿಗೂ ಸೇರಿದ್ದರು.
ಸಂಘಟನೆಯ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಲು ಬೆಂಗಳೂರಿಗೆ ತೆರಳಿದರು. ಬೆಂಗಳೂರಿನ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷನಾಗಿ, ಪ್ರತಿಭಟನಾ ಮೆರವಣಿಗೆ ಸಂದರ್ಭದಲ್ಲಿ ವಿರೋಧಿಗಳಿಂದ ಚಾಕು ಇರಿತಕ್ಕೆ ಒಳಗಾಗಿ, ಸಾವು ಬದುಕಿನ ಹೋರಾಟದಲ್ಲಿ ಅಂತಿಮವಾಗಿ ಜಯಗಳಿಸಿ, ಮತ್ತೆ ಹೋರಾಟದಲ್ಲಿ ತೊಡಗಿಸಿಕೊಂಡವರು.
ಬೆಳಗಾವಿಗೆ ಮರಳಿ, ರಾಮದುರ್ಗದಲ್ಲಿ ಬೀಡಿ ಕಾರ್ಮಿಕರು, ಕಟ್ಟಡ ಕೂಲಿ ಕಾರ್ಮಿಕರ ಸಂಘಗಳನ್ನು ಸ್ಥಾಪಿಸಿ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದ್ದರು. ಪುರಸಭೆ ಚುನಾವಣೆಯಲ್ಲಿ ಜಯಗಳಿಸಿ, ಅಲ್ಲಿನ ಭ್ರಷ್ಟಾಚಾರ ಮತ್ತು ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕೇವಲ 15 ದಿನದಲ್ಲಿ ರಾಜೀನಾಮೆ ನೀಡಿ ಕುಲಕರ್ಣಿ ಹೊರಬಂದಿದ್ದರು.