ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಹಲವು ಸರ್ಕಾರಿ ಅಧಿಕಾರಿಗಳ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದ ಆರೋಪದ ಮೇಲೆ ದಾಳಿ ನಡೆದಿದ್ದು, ಹಲವೆಡೆ, ನಗದು ಸೇರಿದಂತೆ ಹಲವಾರು ಬೆಲೆ ಬಾಳುವ ವಸ್ತುಗಳನ್ನು ಲೋಕಾಯುಕ್ತ ವಶಕ್ಕೆ ಪಡೆದಿದೆ.
ಶಿವಮೊಗ್ಗದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಇಂಜಿನಿಯರ್ ಪ್ರಶಾಂತ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದಾಯಕ್ಕೂ ಮೀರಿ ಗಳಿಸಿದ್ದ ಹಲವಾರು ಚಿನ್ನ-ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. 3.5 ಕೆಜಿ ಬಂಗಾರ, 24 ಕೆಜಿ ಬೆಳ್ಳಿ ಹಾಗೂ 25 ಲಕ್ಷ ಹಾರ್ಡ್ ಕ್ಯಾಶ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾತ್ರವಲ್ಲದೆ, ಪ್ರಶಾಂತ್ ಅವರು ಆರು ಎಕರೆ ಕೃಷಿ ಜಮೀನು ಮತ್ತು ಎರಡು ಸೈಟ್ಗಳನ್ನು ಹೊಂದಿದ್ದಾರೆ. ಅವರ ಮನೆಯಲ್ಲಿ 50 ಬಾಟಲಿ ವಿದೇಶಿ ಮದ್ಯ ಹಾಗೂ ಸುಮಾರು 300 ಜೊತೆ ಶೂಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಇನ್ನು, ಶಿಕಾರಿಪುರದ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಶಂಕರ್ ನಾಯ್ಕ್ ಮನೆಯ ಮೇಲೂ ದಾಳಿ ನಡೆದಿದ್ದು, ಅವರ ಮನೆಯಲ್ಲಿ 350 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಪತ್ತೆಯಾಗಿದೆ. ಅವರು 10 ಎಕರೆ ಜಮೀನು ಹೊಂದಿರುವುದು ದಾಖಲೆಗಳಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಪಿಎಲ್ ಕಾರ್ಡ್ ಹೊಂದಿದ್ದ 21 ಸಾವಿರ ಸರ್ಕಾರಿ ನೌಕರರಿಗೆ 11 ಕೋಟಿ ರೂ. ದಂಡ
ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಮೇಲೂ ಲೋಕಾಯುಕ್ತ ದಾಳಿ ಮಾಡಿದ್ದು, 9ನೇ ತರಗತಿ ವಿದ್ಯಾರ್ಥಿಗೆ ವರ್ಗಾವಣೆ ಪತ್ರ (ಟಿ.ಸಿ) ನೀಡಲು 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಾಲೆಯ ಮುಖ್ಯಶಿಕ್ಷಕ ವಿ ನಾರಾಯಣ ಅವರನ್ನು ಸಾಕ್ಷ್ಯಸಮೇತ ವಶಕ್ಕೆ ಪಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿರಿಯ ಉಪನೋಂದಣಾಧಿಕಾರಿ ಶಿವಶಂಕರ್ ಮೂರ್ತಿ ಅವರ ಮನೆ ಮೇಲೂ ದಾಳಿ ನಡೆದಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ತುಮಕೂರು, ಮೈಸೂರು ಮತ್ತು ಹಾವೇರಿಯಲ್ಲಿಯೂ ಲೋಕಾಯುಕ್ತ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.