ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿ ಗ್ರಾಮ ಬಡ ಮೀನುಗಾರರ ಹಕ್ಕುಪತ್ರಕ್ಕೆ ರಿಯಾಯಿತಿ ದರ ನಿಗದಿಗೊಳಿಸುವಂತೆ ಕಂದಾಯ ಸಚಿವ ಭೈರೇಗೌಡರಿಗೆ ಶಾಸಕ ಕಿರಣ್ ಕೊಡ್ಗಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಕೃಷ್ಣ ಭೈರೇಗೌಡರನ್ನು ಶಾಸಕ ಕಿರಣ್ ಕೊಡ್ಗಿ ಭೇಟಿ ಮಾಡಿದ್ದಾರೆ. ಕೋಡಿ ಗ್ರಾಮದ ಬಡ ಮೀನುಗಾರರ ಹಕ್ಕುಪತ್ರಕ್ಕೆ ನಿಗದಿಗೊಳಿಸಿದ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
“ಸುಮಾರು 400ಕ್ಕೂ ಹೆಚ್ಚು ಅರ್ಜಿದಾರರ ಪೈಕಿ ಈಗಾಗಲೇ ಹಲವರಿಗೆ ಮಂಜೂರಾತಿ ನೀಡಲಾಗಿದೆ. ಕಂದಾಯ ಇಲಾಖೆ ನಿಗದಿಕರಿಸಿದ ಮೊತ್ತ ಪಾವತಿಸಲು ಬಡವರಿಗೆ ಕಷ್ಟವಾಗಿದ್ದು, ಇನ್ನೂ ಹಕ್ಕುಪತ್ರ ಪಡೆಯಲಾಗಿಲ್ಲ. ಮಲ್ಪೆ ಪಡುಕರೆಯ ಕೊಳ ಗ್ರಾಮದಲ್ಲಿ ನೀಡಿರುವ ರಿಯಾಯಿತಿ ದರದ ಮಾದರಿಯಲ್ಲಿ ಕೋಡಿ ಗ್ರಾಮದ ಮೀನುಗಾರರಿಗೂ ರಿಯಾಯತಿ ನೀಡಬೇಕು” ಎಂದು ಶಾಸಕರು ಮನವಿ ಕೇಳಿದ್ದಾರೆ.
ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಇಲಾಖೆಯ ಮುಂದೆ ಮಂಡಿಸಿದ ಮಾಹಿತಿಗಳನ್ನು ಸಚಿವರಿಗೆ ನೀಡಿದ ಕೊಡ್ಗಿಯವರು ಬಹುಬೇಗ ದರ ರಿಯಾಯಿತಿ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ. ಶಾಸಕ ಕಿರಣ್ ಕೊಡ್ಗಿ ಅವರೊಂದಿಗೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇದ್ದರು.