ನನ್ನಿಂದ ಜನಸಾಮಾನ್ಯರಿಗೆ, ಅಭಿಮಾನಿಗಳಿಗೆ ಹಾಗೂ ನನ್ನ ಜಿಲ್ಲೆಯ ಜನರಿಗೆ ನಿರಾಸೆಯಾಗಲು ನಾನು ಬಿಡುವುದಿಲ್ಲ. ಜನರ ಪ್ರೀತಿಗೆ ನನ್ನ ಸ್ಪೀಕರ್ ಸ್ಥಾನ ಯಾವತ್ತೂ ಅಡ್ಡಿಯಾಗಲ್ಲ. ನಾನು ಯಾರಿಂದಲೂ ದೂರವಾಗಲು ಇಷ್ಟಪಡುವುದಿಲ್ಲ ಎಂದು ನೂತನ ಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು.
ಸಭಾಧ್ಯಕ್ಷರಾಗಿ ತವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಯು ಟಿ ಖಾದರ್ ನಮ್ಮಿಂದ ದೂರವಾಗಲಿದ್ದಾರೆ ಎನ್ನುವ ಅನುಮಾನ ಕೆಲವೇ ತಿಂಗಳಲ್ಲಿ ದೂರವಾಗಲಿದೆ. ಆ ರೀತಿ ನಾನು ನಡೆದುಕೊಳ್ಳುವೆ” ಎಂದು ತಿಳಿಸಿದರು.
“ನಮ್ಮ ಜನರ ಪ್ರೀತಿಗೆ ನನ್ನ ಸಭಾಧ್ಯಕ್ಷ ಸ್ಥಾನ ಅಡ್ಡಿಯಾಗಲ್ಲ. ನಾನು ಮಂತ್ರಿಯಾಗಿದ್ದರೆ ಒಂದು ಇಲಾಖೆಗೆ ಮಾತ್ರ ಮಂತ್ರಿ ಆಗಿರುತ್ತಿದ್ದೆ. ಈಗ ಎಲ್ಲ ಶಾಸಕರು, ಅಧಿಕಾರಿಗಳು ನನ್ನ ವ್ಯಾಪ್ತಿಯಲ್ಲೇ ಬರುತ್ತಾರೆ. ನನ್ನ ಜಿಲ್ಲೆಗೆ ಏನು ಬೇಕು ಅದನ್ನು ಅಲ್ಲಿಂದಲೇ ಮಾಡಿಸುವೆ. ಕ್ಷೇತ್ರದ ಅಭಿವೃದ್ಧಿಯನ್ನು ನಾನು ಮರೆಯುವುದಿಲ್ಲ” ಎಂದರು.
“ಈ ಸಭಾಧ್ಯಕ್ಷ ಸ್ಥಾನವನ್ನು ನಾನು ಸಂತೋಷದಿಂದಲೇ ಸ್ವೀಕರಿಸಿದ್ದೇನೆ. ಈ ಬಾರಿ ಹೊಸದಾಗಿ ಬಹಳಷ್ಟು ಶಾಸಕರು ಆಯ್ಕೆಯಾಗಿದ್ದಾರೆ. ಅವರಲ್ಲೂ ಹೊಸ ಜ್ಞಾನ, ಹೊಸ ವಿಚಾರ ಇರುತ್ತದೆ. ಅದನ್ನು ಹೊರತಗೆಯಲು ಪ್ರಯತ್ನಿಸುವೆ. ಹೆಚ್ಚಿನ ಅವಕಾಶ ಯುವ ಶಾಸಕರಿಗೆ ಕೊಡುವೆ. ಈ ಮೂಲಕ ರಾಜ್ಯಕ್ಕೆ ಮತ್ತು ನನ್ನ ಜಿಲ್ಲೆಗೆ ಗೌರವ ತಂದುಕೊಡುವ ಪ್ರಯತ್ನ ಮಾಡುವೆ” ಎಂದು ಹೇಳಿದರು.
“ಈ ಹಿಂದೆ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿರುವೆ. ಇಂದು ಸಭಾಧ್ಯಕ್ಷ ಆಗಿರುವೆ. ಜನರ ಪ್ರೀತಿ ಉಳಿಸಿಕೊಳ್ಳುವೆ. ಆ ಪೀಠದ ಘನತೆಯನ್ನು ಹೆಚ್ಚಿಸುವೆ” ಎಂದು ಭರವಸೆಯ ಮಾತುಗಳನ್ನಾಡಿದರು.