ಸಾಲಬಾಧೆ ತಾಳಲಾರದೆ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿರುವ ಪ್ರತ್ಯೇಕ ಘಟನೆಗಳು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿವೆ.
ತಾಲೂಕಿನ ಕರ್ಣಕುಪ್ಪೆ ಗ್ರಾಮದ ರೈತ ರಾಜಶೆಟ್ಟಿ(78) ಮತ್ತು ಶ್ಯಾನುಭೋಗನಹಳ್ಳಿಯ ಸುರೇಶ್(58) ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ರೈತರು ತಾವು ಬೆಳೆದ ಬೆಳೆಯನ್ನು ನಂಬಿ ಲಕ್ಷಾಂತರ ರೂ. ಸಾಲಸೋಲ ಮಾಡಿ ವ್ಯವಸಾಯ ಮಾಡುತ್ತಾರೆ. ಬೆಳೆ ಚೆನ್ನಾಗಿ ಬಂದರೆ ಬೆಲೆ ಇರುವುದಿಲ್ಲ. ಬೆಲೆ ಇದ್ದರೆ ಬೆಳೆ ಬರುವುದಿಲ್ಲ. ರೈತರ ಬಾಳು ಡೋಲಾಯಮಾನ ಪರಿಸ್ಥಿತಿ. ವ್ಯವಸಾಯ ಮಾಡೋದು ಇಂದಿನ ಪರಿಸ್ಥಿತಿಯಲ್ಲಿ ದುಸ್ಸಾಹಸ ಎನ್ನುವಂತಿದೆ. ಗೊಬ್ಬರಗೋಡು, ಕೀಟನಾಶಕ, ಯೂರಿಯಾ, ಉಳುಮೆ ಮಾಡುವುದು, ಖರ್ಚು ವೆಚ್ಚ ದುಬಾರಿಯಾಗಿರುವ ಸಮಯದಲ್ಲಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಇರದೆ ಕಂಗಾಲಾಗಿ ಹೋಗಿದ್ದು ವ್ಯವಸಾಯಕ್ಕೆ ಪಡೆದ ಸಾಲ ತೀರಿಸಲು ಆಗದೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.
ಹುಣಸೂರು ತಾಲೂಕು ಶ್ಯಾನುಭೋಗನಹಳ್ಳಿಯ ಸುರೇಶ್(58) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೊಸೈಟಿ, ಬ್ಯಾಂಕ್ ಸೇರಿದಂತೆ ಅಂದಾಜು 7 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದ್ದು, ಸರಿಯಾದ ಬೆಳೆ ಬಾರದ ಹಿನ್ನೆಲೆಯಲ್ಲಿ ಸಾಲ ಹಿಂದುರಿಗಿಸಲಾಗದೆ ತನ್ನ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದರಿ ಘಟನೆಗೆ ಸಂಬಂಧಿಸಿದಂತೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ದುರ್ಮರಣ
ಸದರಿ ತಾಲೂಕಿನ ಇನ್ನೋರ್ವ ರೈತ ಹನಗೊಡು ಹೋಬಳಿ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (78) ತಮ್ಮ ಐದು ಎಕರೆ ಭೂಮಿಯಲ್ಲಿ ತಂಬಾಕು ಹಾಗೂ ರಾಗಿ ಬೆಳೆ ಬೆಳೆದಿದ್ದಾರೆ. ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿದಂತೆ ಅಂದಾಜು 8 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಸರಿಯಾದ ಸಮಯಕ್ಕೆ ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾದ್ದರಿಂದ ಮನನೊಂದು ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದರಿ ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.