- ಮೈಸೂರು ನಗರದ ವೀಕ್ಷಣಾಲಯಕ್ಕೆ ಭೇಟಿ ನೀಡಿದ ನಾಗಣ್ಣ ಗೌಡ
- ಮೈಸೂರು ಜಿಲ್ಲೆಯ ಸಾತಗಳ್ಳಿ ಪ್ರದೇಶದಲ್ಲಿ ಮಕ್ಕಳ ಆರೈಕೆ ಕೇಂದ್ರದಲ್ಲಿರುವ ಮಕ್ಕಳಿಗಾಗಿ ಹೊಸ ವೀಕ್ಷಣಾಲಯ ಆಯೋಜನೆ
ಮಕ್ಕಳಿಗೆ ಸುರಕ್ಷತೆ ವಾತಾವರಣ ಸೃಷ್ಟಿಸಲು ಸಾಮಾಜಿಕ ಕಾರ್ಯಕರ್ತರು, ಎನ್ಜಿಒಗಳ ಪ್ರತಿನಿಧಿಗಳು, ಸ್ಥಳೀಯರನ್ನು ಒಳಗೊಂಡ ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ತಿಳಿಸಿದರು.
ಮೈಸೂರು ನಗರದ ವೀಕ್ಷಣಾಲಯಕ್ಕೆ ಭೇಟಿ ನೀಡಿ ಎನ್ಸಿಪಿಸಿಆರ್ ಸದಸ್ಯ ಆರ್.ಜಿ ಆನಂದ್ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. “ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ತಳಮಟ್ಟದಿಂದ ಜಾಗೃತಿ ಮೂಡಿಸುವುದು ಸಮಿತಿಯ ಉದ್ದೇಶವಾಗಿದೆ” ಎಂದು ಹೇಳಿದರು.
“ಬಾಲ್ಯ ವಿವಾಹ ತಡೆ, ಶಿಕ್ಷಣ ಹಕ್ಕು (ಆರ್ಟಿಇ) ಅನುಷ್ಠಾನ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ ಸಂಬಂಧಿತ ಪ್ರಕರಣಗಳ ಮೇಲ್ವಿಚಾರಣೆಗೆ ವಿಶೇಷ ಗಮನ ನೀಡಲಾಗುವುದು. ನಗರದ ಸಾತಗಳ್ಳಿ ಪ್ರದೇಶದಲ್ಲಿ ಮಕ್ಕಳ ಆರೈಕೆ ಕೇಂದ್ರದಲ್ಲಿರುವ ಮಕ್ಕಳಿಗಾಗಿ ಹೊಸ ವೀಕ್ಷಣಾಲಯ ನಿರ್ಮಿಸಲು ಯೋಜಿಸಲಾಗಿದೆ. ಈ ಆಲಯ ಎಲ್ಲ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ” ಎಂದರು.
“ಎಲ್ಲ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಅನುಸರಿಸಲು ಮಾನಿಟರಿಂಗ್ ಅಪ್ಲಿಕೇಶನ್ ಫಾರ್ ಸೀಮ್ಲೆಸ್ ಇನ್ಸ್ಪೆಕ್ಷನ್ಸ್ (ಎಂಎಎಸ್ಐ) ಆಯೋಗಕ್ಕೆ ಸಹಾಯ ಮಾಡುತ್ತಿದೆ. ಈಗ, ಐದು ರಾಜ್ಯಗಳಲ್ಲಿನ ವೀಕ್ಷಣಾಲಯಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ನಾವು ಕ್ಷೇತ್ರ ಪರಿಶೀಲನಾ ಅಭಿಯಾನ ಪ್ರಾರಂಭಿಸಿದ್ದೇವೆ. ಈ ಅಭಿಯಾನವು ಮೈಸೂರಿನಿಂದ ಪ್ರಾರಂಭವಾಗಿದೆ” ಎಂದು ಆರ್.ಜಿ ಆನಂದ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಎಐಡಿಎಸ್ಓ ರಾಜ್ಯಮಟ್ಟದ ಅಧ್ಯಯನ ಶಿಬಿರ
“ಮಕ್ಕಳಪರ ನೀತಿಗಳನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮೈಸೂರಿನ ಮಕ್ಕಳಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಆಯೋಗವು ಜಿಲ್ಲಾಡಳಿತದೊಂದಿಗೆ ಪರಿಶೀಲಿಸುತ್ತದೆ” ಎಂದು ಆನಂದ್ ಹೇಳಿದರು.
“ಉತ್ತಮ ಫಲಿತಾಂಶ ಪಡೆಯಲು ವೀಕ್ಷಣಾ ಗೃಹಗಳಲ್ಲಿ ಮಕ್ಕಳಿಗೆ ಕಲಿಸಲು ಶಿಕ್ಷಕರನ್ನು ನೇಮಿಸಲಾಗುವುದು” ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು.