ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (ಕೆಎಸ್ಆರ್ಟಿಸಿ) ಬಸ್ ಚಲಿಸುತ್ತಿದ್ದಾಗ ಬಾಗಿಲು ತೆರೆದುಕೊಂಡಿದ್ದು, ನಿರ್ವಾಹಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ಮೈಸೂರು ಜಿಲ್ಲೆಯ ಮಾರ್ಚಳ್ಳಿ ಬಳಿ ನಡೆದಿದೆ.
ಘಟನೆಯಲ್ಲಿ ಮೈಸೂರು ವಿಭಾಗದ ಕೆ.ಆರ್ ನಗರ ಘಟಕ ಚಾಲಕ ಕಂ ನಿರ್ವಾಹಕ ಎಚ್.ಪಿ ಯತೀಶ್ ಮೃತಪಟ್ಟಿದ್ದಾರೆ.
ಶುಕ್ರವಾರದಂದು 71 ಎಬಿ ಅನುಸೂಚಿಯಲ್ಲಿ ಕೆ.ಆರ್ ನಗರದಿಂದ ಮೂಲೆ ಪೆಟ್ಲು ಮಾರ್ಗದ ಬಸ್ನಲ್ಲಿ ಯತೀಶ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಾರ್ಚಳ್ಳಿ ಬಳಿ ಬಸ್ ಚಲಿಸುತ್ತಿದ್ದಾಗ ಬಸ್ನ ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿದ್ದು, ಬಾಗಿಲ ಬಳಿಯೇ ನಿಂತಿದ್ದ ಯತೀಶ್ ಬಸ್ನಿಂದ ಕೆಳಗೆ ಬಿದ್ದಾರೆ. ಕಲ್ಲಿಗೆ ತಲೆ ಹೊಡೆದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಾರಿಗೆ ಸಂಸ್ಥೆಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರ
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾರಿಗೆ ಸಂಸ್ಥೆಗಳನ್ನು ನಿರ್ಲಕ್ಷಿಸಿರುವುದು ಈ ಘಟನೆಯಿಂದ ಸ್ಪಷ್ಟವಾಗಿ ಕಾಣುತ್ತಿದೆ. ಹಲವಾರು ಬಸ್ಗಳ ಬಿಡಿ ಭಾಗಗಳು ಹಾಳಾಗಿದ್ದರೂ, ಅವುಗಳನ್ನು ಬದಲಿರುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಬಹುತೇಕ ಬಸ್ಗಳು ಚಾಲನೆಗೆ ಯೋಗ್ಯವಾಗಿಲ್ಲ. ಆದರೂ ಕೂಡ ಬಲವಂತದಿಂದ ನಿರ್ವಾಹಕ ಮತ್ತು ಚಾಲಕರನ್ನು ರೂಟ್ ಮೇಲೆ ಕಳುಹಿಸುತ್ತಿದ್ದಾರೆ. ಪರಿಣಾಮ ಈ ರೀತಿಯ ದುರ್ಘಟನೆಗಳು ನಡೆಯುತ್ತಿವೆ ಎಂಬ ಆರೋಪಗಳು ವ್ಯಕ್ತವಾಗಿವೆ.
ನಾಲ್ಕು ಸಾರಿಗೆ ನಿಗಮಗಳ ಬಹುತೇಕ ಬಸ್ಗಳು ಸಮರ್ಪಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿದ್ದು, ಆ ಬಸ್ಗಳನ್ನೇ ಕಾರ್ಯಾಚರಣೆಗೆ ಬಿಡಲಾಗುತ್ತಿದೆ. ಈ ಬಗ್ಗೆ ಸಾರಿಗೆ ಸಚಿವರಾಗಲಿ, ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಾಗಲಿ ಸರಿಯಾದ ಗಮನ ಹರಿಸುತ್ತಿಲ್ಲ. ಪರಿಣಾಮ ಸಾರ್ವಜನಿಕರು ಯೋಗ್ಯವಿಲ್ಲದ ಬಸ್ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈಗಾಗಲೇ ಹಲವಾರು ಕಡೆ ಬಸ್ ಚಲಿಸುತ್ತಿದ್ದಾಗಲೇ ಚಕ್ರಗಳು ಬೇರ್ಪಟ್ಟಿರುವುದು, ಬ್ಲೇಡ್ಗಳು ಮುರಿದು ಅಪಘಾತಗಳು ಸಂಭವಿಸಿರುವುದು, ಬಸ್ ವಾಲಿಕೊಂಡಿರುವುದರ ಬಗ್ಗೆ ವರದಿಗಳು ಬರುತ್ತಿವೆ. ಆದರೂ, ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅರಣ್ಯ ಸಂರಕ್ಷಣಾ ಕಾಯ್ದೆ; ವನ್ಯಜೀವಿ-ಮಾನವ ಪ್ರಾಣಿ ಸಂಘರ್ಷಕ್ಕೆ ದಾರಿ
“ಇಂದು ನಡೆದಿರುವ ಅವಘಡಕ್ಕೆ ಯಾರು ಜವಾಬ್ದಾರರಾಗುತ್ತಾರೆ. ಇಲ್ಲಿ ಒಂದು ಪ್ರಾಣವೇ ಹೋಗಿದೆ. ಇದಕ್ಕೆ ಕಾರಣ ಯಾರು, ಚಾಲನೆಗೆ ಯೋಗ್ಯವಾಗದ ರೀತಿ ಬಸ್ಸನ್ನು ಸಿದ್ಧಗೊಳಿಸಿ ರಸ್ತೆ ಮೇಲೆ ಹೋಗಲು ಬಿಟ್ಟ ತಾಂತ್ರಿಕ ವಿಭಾಗದ ಅಧಿಕಾರಿಗಳು ಹೊರುತ್ತಾರೆಯೋ, ಇಲ್ಲ ಯೋಗ್ಯವಾಗಿದೆ ಈ ಬಸ್ ತೆಗೆದುಕೊಂಡು ಹೋಗು ಅಂತ ಕಳಿಹಿಸಿದ ಘಟಕ ವ್ಯವಸ್ಥಾಪಕರು ಈ ಸಾವಿನ ಜವವ್ದಾರಿ ಹೊರುತ್ತಾರೆಯೋ? ಎಂಬ ಪ್ರಶ್ನೆಗಳು ಭುಗಿಲೆದ್ದಿವೆ.