ಮೈಸೂರು | ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ʼವೇಶ್ಯಾವಾಟಿಕೆಯ ಕಥೆ-ವ್ಯಥೆ’ ಕೃತಿ ಆಯ್ಕೆ

Date:

ಲೇಖಕಿ, ಸಂಶೋಧಕಿ ಬಿ.ಎಂ ರೋಹಿಣಿ ಅವರ  ‘ವೇಶ್ಯಾವಾಟಿಕೆಯ ಕಥೆ-ವ್ಯಥೆ’ ಸಂಶೋಧನಾ ಕೃತಿಯನ್ನು 2023ನೇ ಸಾಲಿನ ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ) ನೀಡಲಾಗುವ ‘ಡಾ.ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ 2019-2022ರ ಅವಧಿಯಲ್ಲಿ ಮಹಿಳೆಯರಿಂದ ಪ್ರಕಟವಾದ ‘ವಿಮರ್ಶೆ ಮತ್ತು ಸಂಶೋಧನಾ ಕೃತಿಗಳನ್ನು’ ಆಹ್ವಾನಿಸಲಾಗಿತ್ತು. 46 ಮಂದಿ ಲೇಖಕಿಯರು ತಮ್ಮ ಕೃತಿಗಳನ್ನು ಕಳುಹಿಸಿದ್ದರು. ಅವುಗಳನ್ನು ಅವಲೋಕಿಸಿದ ಡಾ. ಎಂ.‌ ಉಷಾ, ಡಾ.ಸೆಲ್ವಕುಮಾರಿ ಮತ್ತು ಡಾ. ಆರ್ ಸುನಂದಮ್ಮ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸಂಶೋಧನೆಯ ವಸ್ತು, ವ್ಯಾಪ್ತಿ, ವಿಷಯ ಮತ್ತು ಒಳನೋಟಗಳನ್ನು ಪರಿಗಣಿಸಿ ರೋಹಿಣಿಯವರ ಕೃತಿಯನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ₹25,000 ನಗದು ಬಹುಮಾನ, ಫಲಕವನ್ನು ಒಳಗೊಂಡಿದೆ.

“ಎಪ್ಪತ್ತೊಂಬತ್ತರ ಹರೆಯದಲ್ಲೂ ಓದು, ಸಂಶೋಧನೆ, ಸಂಘಟನೆ, ಸಮಾಲೋಚನೆಗಳಲ್ಲಿ ಕ್ರಿಯಾಶೀಲರಾಗಿರುವ ರೋಹಿಣಿಯವರನ್ನು ಹಲವು‌ ಸಂಘ ಸಂಸ್ಥೆಗಳು‌ ಗೌರವಿಸಿವೆ. ಸಮತಾ ಅಧ್ಯಯನ ‌ಕೇಂದ್ರವು ʼವಿಜಯಾ ದಬ್ಬೆʼ ಹೆಸರಿನಲ್ಲಿ ಸ್ಥಾಪಿಸಿರುವ ಪ್ರಶಸ್ತಿಯನ್ನು ಮೊದಲನೆಯ ವರ್ಷವೇ ಈ ಹಿರಿಯಕ್ಕನಿಗೆ ನೀಡಲು ಹೆಮ್ಮೆ ಪಡುತ್ತದೆ. ಜೂನ್  1ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ” ಎಂದು ಕೇಂದ್ರದ ಅಧ್ಯಕ್ಷೆ ಡಾ. ಸಬಿಹಾ ಭೂಮಿಗೌಡ ಪ್ರಕಟಣೆಗೆ ತಿಳಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಿ.ಎಂ.ರೋಹಿಣಿ ಪರಿಚಯ:

ಹೊಸ ವಿಚಾರ, ಆಲೋಚನೆಗಳಿಗೆ ಸದಾ ತೆರೆದುಕೊಳ್ಳುವ ಸರಳ ಸ್ವಭಾವದ ಬಿ.ಎಂ.ರೋಹಿಣಿ ಮಂಗಳೂರು ತಾಲೂಕು ಬಂಟ್ವಾಳ ಹತ್ತಿರದ ತುಂಬೆಯ ಕಾಣೆಮಾರಿನಲ್ಲಿ 1944 ಏಪ್ರಿಲ್ 6 ರಂದು ಜನಿಸಿದರು. ತಾಯಿ ದೇವಕಿ, ತಂದೆ ಕೊಗ್ಗಪ್ಪ.

ಕಪ್ಪು ಬಣ್ಣದ ಹುಡುಗಿಗೆ ಶಾಲೆ ಕಲಿವ ಆಸೆ. ಬಡತನ ಇವರಿಗೆ 6ನೇ ತರಗತಿಯಿಂದಲೇ ಬೀಡಿ ಕಟ್ಟಲು ಕಲಿಸಿತು. ತಂದೆಯಿಂದ ಸಾಹಿತ್ಯ-ಸಂಗೀತದ ಆಸಕ್ತಿ ಬಳುವಳಿಯಾಗಿ ಬಂದಿತ್ತಾದರೂ ವಿದ್ಯೆಗೆ ಬೆಂಗಾವಲಾಗಿದ್ದು ತಾಯಿ. ಬಾಲ್ಯದಿಂದಲೇ ಬರೆವಣಿಗೆ  ಕೈ ಹಿಡಿದಿತ್ತು. ಆದರೆ, ಇತರರಿಗೆ ತೋರಿಸುವ ಧೈರ್ಯವಿರಲಿಲ್ಲ. ಬಡತನ, ಅವಮಾನಗಳು, ಮೈಬಣ್ಣ ಇವರನ್ನು ಕೀಳರಿಮೆಯ ಕೂಪಕ್ಕೆ ನೂಕಿತ್ತು. ಇವೆಲ್ಲದರ ಮಧ್ಯೆ ಬದುಕನ್ನು ಹಿಡಿದಿಟ್ಟು ನಡೆಸುವ ಛಲಕ್ಕೆ ಕೊರತೆ ಇರಲಿಲ್ಲ.

ಓದು ಮುಗಿಸಿ ಶಾಲಾ ಶಿಕ್ಷಕಿಯಾದರು.  ಹಲವು ಏಳು ಬೀಳುಗಳೊಂದಿಗೆ ಜೀವನ ಅನುಭವಿಸುತ್ತಾ, ಓದು-ಬರಹ ರೂಢಿಸಿಕೊಂಡರು. ಅನುಭವಗಳ ಆಧಾರದ ಮೇಲೆ ನೇರವಾಗಿ, ಸರಳವಾಗಿ ಬರೆದರು. ಅವರಿಗೆ ಬದುಕು ಬೇರೆಯಲ್ಲ, ಬರಹ ಬೇರೆಯಲ್ಲ. ಅಸಾಧ್ಯವಾದ ಆದರ್ಶಗಳನ್ನು ಅವರು ಬರೆದಿಲ್ಲ. ಇದುವೇ ಪರಮ ಸತ್ಯ ಎನ್ನುವುದಕ್ಕಿಂತ, ಬೇರೆಬೇರೆ ಆಲೋಚನೆಗಳಿಗೆ ತೆರೆದುಕೊಳ್ಳುವ ಪ್ರಯತ್ನ ಮಾಡಿದ್ದು ಅವರ ಬರೆವಣಿಗೆಯಲ್ಲಿ ಎದ್ದುಕಾಣುತ್ತದೆ. ಶಿಕ್ಷಕಿಯಾಗಿ ಅವರ ಸಾಧನೆ ಅಪಾರ.

ಪ್ರಕಟಿತ ಕೃತಿಗಳು: ಕರ್ತವ್ಯ , ಗರಿಕೆಯ ಕುಡಿಗಳು, ʼಒಂದು ಹಿಡಿ ಮಣ್ಣುʼ ಇವರ ಕಥಾ ಸಂಕಲನಗಳು. ʼಸ್ತ್ರೀ-ಸಂವೇದನೆʼ, ʼಸ್ತ್ರೀ ಶಿಕ್ಷಣ ಸಂಸ್ಕೃತಿʼ, ʼಸ್ತ್ರೀ ಭಿನ್ನ ಮುಖಗಳುʼ, ʼಸಾಮಾಜಿಕ ತಲ್ಲಣಗಳುʼ, ʼಆರಾಧನಾ ರಂಗದಲ್ಲಿ ಸ್ತ್ರೀʼ, ʼಪ್ರತಿಸ್ಪಂದನ ಮತ್ತು  ಸಮೀಕ್ಷೆʼ ಅವರ ಲೇಖನ, ವಿಮರ್ಶಾ ಕೃತಿಗಳು.

ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಹೆಚ್ಚಿದ ಮಳೆ, ಕುಸಿದ ಬೆಲೆ; ಕಂಗಾಲಾದ ಹೂ ಬೆಳೆಗಾರರು

ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ವಿಶಿಷ್ಟ. ಅವಿವಾಹಿತ ಮಹಿಳೆ- ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಮಾಸ್ತಿಕಲ್ಲುಗಳು-ವೀರಗಲ್ಲುಗಳು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ, ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವರ ಗುತ್ತು ಮನೆಗಳ ಅಧ್ಯಯನ ಇವು  ಇತರರೊಂದಿಗೆ ಸೇರಿ ನಡೆಸಿದ ಸಂಶೋಧನಾ ಅಧ್ಯಯನಗಳು. ʼವೇಶ್ಯಾವಾಟಿಕೆಯ ಕಥೆ-ವ್ಯಥೆʼ(2022) ಅವರದೇ ಸಂಶೋಧನಾ ಕೃತಿ. ‘ಅಧ್ಯಾಪಕಿಯ ಅಧ್ವಾನಗಳು’ ಅನುಭವ ಕಥನ. ‘ನಾಗಂದಿಗೆಯೊಳಗಿನಿಂದ’ ಜೀವನ ಕಥನ.

ಬರೆವಣಿಗೆ, ಓದಿಗಷ್ಟೆ ಸೀಮಿತವಾಗದೆ ವಿಭಿನ್ನ ಸಾಮಾಜಿಕ ಚಟುವಟಿಕೆಗಳ ಒಡನಾಟವನ್ನು ಸದಾ ಇಟ್ಟುಕೊಂಡವರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಡೀಡ್ಸ್, ವೆಲೊರೆಡ್, ಸಂಚಲನ, ಶಿಕ್ಷಕ-ಸಂಗತಿ ಮುಂತಾದ ಹಲವು ಸಂಘ ಸಂಸ್ಥೆಗಳ ಜೊತೆ ಸಕ್ರಿಯವಾಗಿದ್ದಾರೆ.  ಹೊರನೋಟಕ್ಕೆ ಅತ್ಯಂತ ಸರಳವಾಗಿ, ನಮ್ರವಾಗಿ ಕಾಣುವ ಅವರ ಬದುಕಿನ ತುಂಬ ದಿಟ್ಟ ನಿರ್ಧಾರಗಳೇ ತುಂಬಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬಿಜೆಪಿಯಿಂದ ಸಂವಿಧಾನ ಆಶಯಗಳು ಬುಡಮೇಲು : ಡಿ.ಜಿ.ಸಾಗರ್

ದೇಶದಲ್ಲಿ ಪ್ರತಿ ಆರು ನಿಮಿಷಗಳಿಗೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ...

ಯಾದಗಿರಿ | ಈಜಲು ಹೋಗಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಸಾವು

ಕೆರೆಯಲ್ಲಿ ಈಜಾಡಲು ತೆರಳಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ...

ದಾವಣಗೆರೆ | ಹೆಗಡೆ ನಗರಕ್ಕೆ ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಭೇಟಿ; ಸಮಸ್ಯೆಗಳ ಅನಾವರಣ

ದಾವಣಗೆರೆ ನಗರದ ರಿಂಗ್ ರಸ್ತೆಯಲ್ಲಿ ವಾಸವಿದ್ದ ನೂರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಿ, ತಾಲೂಕಿನ...

ಲೋಕಸಭಾ ಚುನಾವಣೆ | ಬಿಜೆಪಿ ಭದ್ರಕೋಟೆ ಬೆಂ. ದಕ್ಷಿಣದ ಮತದಾರರು ಹೇಳುತ್ತಿರೋದೇನು?

ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಏ.26 ರಂದು...