- ʼಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕಾಂಗ್ರೆಸ್ʼ
- ʼಚುನಾವಣಾ ಸಮಯದಲ್ಲಿ ಸಾಮರಸ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆʼ
ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಕರೆಯುವ ಕೆ ಎಚ್ ಮುನಿಯಪ್ಪ ಅವರಿಗೆ ಮತ್ತು ಅವರ ಕಾಂಗ್ರೆಸ್ಗೆ ಅಧಿಕಾರದ ದುರಾಸೆ ಇದೆಯೇ ಹೊರತು ಜೆಡಿಎಸ್ಗೆ ಇಲ್ಲ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಸಣ್ಣ ಅಮಾನಿಕೆರೆ ಈದ್ಗಾ ಮೈದಾನದಲ್ಲಿದ ಈದ್ ಉಲ್ ಫಿತರ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದರು.
“75 ವರ್ಷಗಳ ಕಾಲ ಆಡಳಿತ ನಡೆಸಿ, ಅವರ ತಪ್ಪುಗಳಿಂದಲೇ ಬಿಜೆಪಿಗೆ ಅಧಿಕಾರ ಸಿಗುವಂತೆ ಮಾಡಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ತಪ್ಪಿಸಲು ಜೆಡಿಎಸ್ನೊಂದಿಗೆ ಮೈತ್ರಿ ಮಾಡಿಕೊಂಡು, ಇದೀಗ ಬಂದು ನಾವು ಬಿ ಟೀಮ್ ಎನ್ನುವುದು ರಾಜಕೀಯ ಲಾಲಸೆ ಅಲ್ಲದೇ ಇನ್ನೇನು?” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | 7 ವಿಧಾನಸಭಾ ಕ್ಷೇತ್ರದ 86 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ: ಜಿಲ್ಲಾಧಿಕಾರಿ
“ದೇವನಹಳ್ಳಿ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ವಿರುದ್ಧವಾಗಿ ಯಾವುದೇ ಅಂಶವು ಸಿಗದ ಕಾರಣ ಚುನಾವಣಾ ಸಮಯದಲ್ಲಿ ಸಾಮರಸ್ಯಕ್ಕೆ ತೊಂದರೆಯಾಗುವಂತೆ ಮಾತನಾಡುತ್ತಿದ್ದಾರೆ. ಜೆಡಿಎಸ್ನೊಂದಿಗೆ ಅಲ್ಪಸಂಖ್ಯಾತರು ಹೊಂದಿರುವ ಬಾಂಧವ್ಯ ಹಾಳು ಮಾಡುವುದೇ ಅವರ ಉದ್ದೇಶ ಅವರ ಮಾತಿಗೆ ಹೆಚ್ಚು ಗಮನ ಹರಿಸಬೇಡಿ” ಎಂದು ವಿನಂತಿಸಿಕೊಂಡರು.