- ಕಾಡ್ಗಿಚ್ಚಿನಿಂದ ನಾಶವಾಗಿದ್ದ ಅರಣ್ಯ ಪ್ರದೇಶದಲ್ಲಿ ಪುನಃ ಹುಲ್ಲು ಬೆಳೆಯಲು ಪ್ರಾರಂಭಿಸಿದೆ
- ಕಳೆದ ಮೂರು ತಿಂಗಳಲ್ಲಿ 13 ಎಕರೆ ಹುಲ್ಲುಗಾವಲು ಪ್ರದೇಶ ಕಾಡ್ಗಿಚ್ಚಿನಿಂದ ನಾಶವಾಗಿತ್ತು
ಮೈಸೂರು ಮತ್ತು ಚಾಮರಾಜನಗರ ಅವಳಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಈ ವಾರ ಸುರಿದ ಮುಂಗಾರು ಪೂರ್ವ ಮಳೆಯಿಂದ ಕೆಲವರಿಗೆ ಸಂತೋಷವಾಗಿದ್ದರೆ, ಇನ್ನೂ ಕೆಲವರಿಗೆ ನಷ್ಟ ಉಂಟಾಗಿದೆ.
ಗಾಳಿಮಳೆ ಸುರಿದ ಪರಿಣಾಮ ತೋಟಗಾರಿಕಾ ಬೆಳೆಗಳು ನಾಶವಾಗಿದ್ದರಿಂದ ಬಾಳೆ ಸೇರಿದಂತೆ ಇತರೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಆದರೆ, ಕಾಡ್ಗಿಚ್ಚಿನಂತಹ ಪ್ರಕರಣಗಳನ್ನು ತಡೆಯಲು ಮಳೆ ಬಂದಿರುವುದು ಅರಣ್ಯವಾಸಿಗಳಿಗೆ ಸ್ವಾಗತಾರ್ಹ ಪರಿಹಾರವಾಗಿದೆ.
ಚಾಮರಾಜನಗರ ಜಿಲ್ಲೆಯಾದ್ಯಂತ ಕಳೆದ ಗುರುವಾರ 4.5 ಮಿಲಿಮೀಟರ್ ಮಳೆಯಾಗಿದ್ದು, ಕೆಲವು ವಾರಗಳ ಕಾಲ ಬಿಸಿಲಿನ ತಾಪದಿಂದ ಬಳಲುತ್ತಿರುವ ಜನರಿಗೆ ತಾತ್ಕಾಲಿಕ ಪರಿಹಾರ ದೊರೆತಿದೆ.
“ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಮತ್ತು ಹನೂರು ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಮಳೆಯಾಗಿದ್ದು, ಯಳಂದೂರಿನಲ್ಲಿ ಅತಿ ಹೆಚ್ಚು 16.8 ಮಿಲಿಮೀಟರ್ ಮಳೆಯಾಗಿದೆ. ಹನೂರು, ಕೊಳ್ಳೇಗಾಲ, ಚಾಮರಾಜನಗರ ಜಿಲ್ಲೆಯ ಮರಿಯಾಲ, ಮರಿಯಲಹುಂಡಿ, ಕಡಳ್ಳಿ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬಾಳೆ, ತೆಂಗು ಬೆಳೆಗಳು ನೆಲಕ್ಕುರುಳಿವೆ” ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
“ಮೈಸೂರು ನಗರ ಮತ್ತು ಜಿಲ್ಲೆಯ ಹಲವಾರು ಸ್ಥಳಗಳಲ್ಲಿ ಕಳೆದ ವಾರ ಬಿರುಗಾಳಿಯೊಂದಿಗೆ ಚದುರಿದ ಸಾಧಾರಣ ಮಳೆಯಾಗಿದೆ” ಎಂದು ಮೈಸೂರಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ತಾಂತ್ರಿಕ ಅಧಿಕಾರಿ ನಾಗೇಂದ್ರಪ್ಪ ತಿಳಿಸಿದ್ದಾರೆ.
“ಮುಂಗಾರು ಪೂರ್ವ ಮಳೆಯಿಂದ ಜಿಲ್ಲೆಯ ಒಣಭೂಮಿ ಪ್ರದೇಶಗಳಲ್ಲಿ ಮುಂಗಾರು ಪೂರ್ವ ಬೆಳೆ ಬಿತ್ತನೆ ಮಾಡಲು ರೈತರು ತಮ್ಮ ಭೂಮಿಯನ್ನು ಹಸನು ಮಾಡಿಕೊಳ್ಳಲು ಅನುಕೂಲವಾಗಿದೆ. ಮುಂಗಾರು ಪೂರ್ವ ಋತುವಿನಲ್ಲಿ ಜಿಲ್ಲೆಯಾದ್ಯಂತ ಹರಡಿರುವ ಎಲ್ಲ 75 ಕೃಷಿ ಸಂಪರ್ಕ ಕೇಂದ್ರಗಳಿಂದ ಬೀಜ ಪೂರೈಕೆಗೆ ಬೇಡಿಕೆಯ ವರದಿಗಳನ್ನು ಕೃಷಿ ಇಲಾಖೆ ಸ್ವೀಕರಿಸಿದೆ” ಎಂದು ಮಾಹಿತಿ ನೀಡಿದ್ದಾರೆ.
ಅವಳಿ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಮಳೆಯಿಂದ ಕಾಡ್ಗಿಚ್ಚಿನ ಘಟನೆಗಳು ಕಡಿಮೆಯಾಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
“ಎಂ.ಎಂ.ಬೆಟ್ಟ, ಕಾವೇರಿ ವನ್ಯಜೀವಿ ವಿಭಾಗ, ಬಿಆರ್ಟಿ ಹುಲಿ ಮೀಸಲು ಪ್ರದೇಶ, ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶ ಸೇರಿದಂತೆ ಚಾಮರಾಜನಗರ ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿದ ಮುಂಗಾರು ಪೂರ್ವ ಮಳೆಯು ಕಾಡ್ಗಿಚ್ಚಿನ ಭೀತಿಯನ್ನು ತಡೆಗಟ್ಟಿದೆ. ಅಲ್ಲದೆ, ಜಿಲ್ಲೆಯ ಕೆರೆಕಟ್ಟೆಗಳು ಸೇರಿದಂತೆ ಇತರೆ ಜಲಮೂಲಗಳು ತುಂಬುವಂತಾಗಿದೆ” ಎಂದು ಕಾವೇರಿ ವನ್ಯಜೀವಿ ಅಭಯಾರಣ್ಯದ ಉಪ ಸಂರಕ್ಷಣಾಧಿಕಾರಿ ನಂದೀಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೋ ಸಾಗಾಟ | ವಾಹನ ತಡೆದ ಬಳಿಕ ಸ್ಟನ್ ಗನ್ ಬಳಸಿ ದೌರ್ಜನ್ಯ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ
“ಪ್ರಸ್ತುತ ವರ್ಷದಲ್ಲಿ ಅಭಯಾರಣ್ಯದಲ್ಲಿ ಬೃಹತ್ ಪ್ರಮಾಣದ ಬೆಂಕಿ ಪ್ರಕರಣ ವರದಿಯಾಗಿದೆ. ಕಳೆದ ಮೂರು ತಿಂಗಳಲ್ಲಿ ಸುಮಾರು 13 ಎಕರೆ ಹುಲ್ಲುಗಾವಲು ಪ್ರದೇಶ ಕಾಡ್ಗಿಚ್ಚಿನಿಂದ ನಾಶವಾಗಿದೆ. ಸಾಧಾರಣದಿಂದ ವ್ಯಾಪಕ ಮಳೆಯಾದ ಕಾರಣ ಅರಣ್ಯ ಪ್ರದೇಶದಲ್ಲಿ ಪುನಃ ಹುಲ್ಲು ಬೆಳೆಯಲು ಪ್ರಾರಂಭಿಸಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
“ಹುಲ್ಲುಗಾವಲು ಪ್ರದೇಶ ಚಿಗುರೊಡೆಯುತ್ತಿದ್ದಂತೆ ಜಿಂಕೆ, ಕಾಡೆಮ್ಮೆ ಮತ್ತು ಇತರ ಸಸ್ಯಾಹಾರಿ ಪ್ರಾಣಿಗಳ ಮೇವಿಗೆ ಸಹಾಯವಾಗಿದೆ. ಮಳೆಯು ಕಾಡಿನ ಅನೇಕ ಜಲಮೂಲಗಳಿಗೆ ನೀರು ಬರಲು ಸಹಾಯವಾಗಿದೆ” ಎಂದು ಹೇಳಿದ್ದಾರೆ.