- ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಲು ಒತ್ತಾಯ
- ತಿಂಗಳಿನಿಂದ ಧರಣಿ ನಡೆಸಿದರೂ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರ
ಕುಸ್ತಿಪಟುಗಳು ತಮಗಾದ ಅನ್ಯಾಯದ ವಿರುದ್ಧ ದೆಹಲಿಯಲ್ಲಿ ಹೋರಾಡುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ಮತ್ತು ಕೇಂದ್ರ ಸರ್ಕಾರದ ಕ್ರೂರ ಧೋರಣೆಯನ್ನು ಖಂಡಿಸಿ ಕಲಬುರಗಿ ಸಂವಿಧಾನಪರ ಸಂಘಟನೆಗಳ ಒಕ್ಕೂಟ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.
ಒಲಿಂಪಿಕ್ ಮಂದ್ಯಾವಳಿಗಳಲ್ಲಿ ಭಾಗವಹಿಸಿ ಪದಕವನ್ನು ಪಡೆದು, ರಾಷ್ಟ್ರದ ಕ್ರೀಡಾ ಜಗತ್ತಿನ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವಿನೇಶ್ ಪ್ರೋಗಾಟ್, ಸಾಕ್ಷಿ ಮಲ್ಲಿಕ್ ಮತ್ತು ಇನ್ನಿತರ ಕುಸ್ತಿಪಟುಗಳು ರಾಷ್ಟ್ರೀಯ ಕುಸ್ತಿಪಟುಗಳ ಒಕ್ಕೂಟದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಗೆ ದೂರು ಸಲ್ಲಿಸಿ, ಎಫ್ಐಆರ್ ದಾಖಲಿಸಿದ್ದು, ಈವರೆಗೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪ್ರಭಟನಾಕಾರರು ಕಿಡಿಕಾರಿದರು.
ಆರೋಪಿಯ ಬಂಧನಕ್ಕೆ ಆಗ್ರಹಿಸಿ ಒತ್ತಾಯಿಸಿ ಸಂತ್ರಸ್ತ ಕ್ರೀಡಾಪಟುಗಳು ಕಳೆದ ಒಂದು ತಿಂಗಳಿನಿಂದ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು ಈಗ ಇಡೀ ವಿಶ್ವಕ್ಕೆ ಗೊತ್ತಾಗಿದೆ. ರಾಷ್ಟ್ರೀಯ ಕ್ರೀಡಾಪಟುಗಳ ಹೋರಾಟ ಬೆಂಬಲಿಸಿ ಕಲಬುರಗಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಬಿಜೆಪಿ ಸಂಸದನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ರಾಷ್ಟ್ರಪತಿಗಳು ಕೂಡಲೇ ಮಧ್ಯ ಪ್ರವೇಶಿಸಿ ಆರೋಪಿಯನ್ನು ಫೋಕ್ಸೋ ಕಾಯ್ದೆಯಡಿ ಬಂಧಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರೊ. ಆರ್ ಕೆ ಹುಡಗಿ, ದತ್ತಾತ್ರೇಯ ಇಕ್ಕಳಕಿ, ಮಹಾಂತೇಶ್ ನವಲಕಲ್, ಮೋಹನ್ ಎಂ. ಕಟ್ಟಿಮನಿ, ಜಯಶ್ರೀ ಎಂ. ಕಟ್ಟಿಮನಿ, ಎಸ್ ಎನ್ ಜೋಗನ್, ಎಸ್ ಬಿ ರೋಲ್, ಆನಂದ ಎಸ್. ದೊಡ್ಡಮನಿ, ಅಶ್ವಿನಿ ಮದನಕರ್, ದಿಲೀಪ್ ಕುಮಾರ್, ಪವನ ಕುಮಾರ್, ಮಲ್ಲಿಕಾರ್ಜುನ ಖನ್ನಾ ಭಾಗವಹಿಸಿದ್ದರು.