ಭಾರತ್ ಜೋಡೋ ಯಾತ್ರೆ ಸಾಗಿದ ದಾರಿಯಲ್ಲಿ ಬಿಜೆಪಿ ವಿರೋಧಿ ಭಾವನೆ ಆಕ್ರೋಶವಾಗಿ ಬದಲಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಲಾಭವಾಗಿ ಪರಿಣಮಿಸಿದರೆ, ಬಿಜೆಪಿಗೆ ಅತಿದೊಡ್ಡ ನಷ್ಟವನ್ನು ತಂದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸಾಗಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಿಂದ ಈ ಬಾರಿಯ ಚುನಾವಣೆ ಮೇಲೆ ಪ್ರಭಾವ ಕಂಡು ಬಂದಿದೆಯೇ ಎನ್ನುವ ಪ್ರಶ್ನೆ ರಾಷ್ಟ್ರೀಯ ಮತ್ತು ಕನ್ನಡ ಮಾಧ್ಯಮಗಳಲ್ಲಿ ಕೇಳಿ ಬಂದಿದೆ.
ಕೇಂದ್ರದ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ವಾಸ್ತವವೇನು? ಅಂಕಿ- ಅಂಶಗಳನ್ನು ನೋಡಿದರೆ, ಭಾರತ್ ಜೋಡೋ ಯಾತ್ರೆ ಸಾಗಿದ ದಾರಿಯಲ್ಲಿ ಬಿಜೆಪಿ ವಿರೋಧಿ ಭಾವನೆ ಆಕ್ರೋಶವಾಗಿ ಬದಲಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಲಾಭವಾಗಿ ಪರಿಣಮಿಸಿದರೆ, ಬಿಜೆಪಿಗೆ ಅತಿದೊಡ್ಡ ನಷ್ಟವನ್ನು ತಂದಿದೆ.
ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ಒಟ್ಟು 21 ವಿಧಾನಸಭಾ ಕ್ಷೇತ್ರದಲ್ಲಿ ಸಾಗಿತ್ತು. ಅವುಗಳ ಪೈಕಿ ಈ ಬಾರಿಯ ಚುನಾವಣೆಯಲ್ಲಿ 16 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಜೆಡಿಎಸ್ ಮೂರು, ಎಸ್ಕೆಪಿಯ ದರ್ಶನ್ ಪುಟ್ಟಣ್ಣಯ್ಯ 1 ಮತ್ತು ಬಿಜೆಪಿ ಒಂದು ಕ್ಷೇತ್ರಗಳನ್ನು ಗೆದ್ದುಕೊಂಡಿದ್ದಾರೆ.
ಆದರೆ, 2018ರ ಚುನಾವಣೆಯಲ್ಲಿ ಇವುಗಳಲ್ಲಿ ಬಹುತೇಕ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿ ಇರಲಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ 21 ಕ್ಷೇತ್ರಗಳ ಪೈಕಿ 12 ಬಿಜೆಪಿಯ ತೆಕ್ಕೆಯಲ್ಲಿದ್ದರೆ, ಜೆಡಿಎಸ್ ಬಳಿ 4 ಕ್ಷೇತ್ರಗಳಿದ್ದವು. ಕಾಂಗ್ರೆಸ್ ಬಳಿ 5 ಸ್ಥಾನಗಳಷ್ಟೇ ಇದ್ದವು. ಯಾತ್ರೆಯ ಮಾರ್ಗದಲ್ಲಿದ್ದ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5 ಕ್ಷೇತ್ರಗಳಿಂದ 16 ಕ್ಷೇತ್ರಗಳಿಗೆ ಏರಿದೆ.
ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಯಾವ ಯಾವ ಕ್ಷೇತ್ರಗಳು?
ಅಂಕಿ- ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಒಟ್ಟು 21 ವಿಧಾನಸಭಾ ಕ್ಷೇತ್ರದಲ್ಲಿ ಸಾಗಿತ್ತು. ಈ ಕ್ಷೇತ್ರಗಳೆಂದರೆ, ಗುಂಡ್ಲುಪೇಟೆ, ನಂಜನಗೂಡು, ವರುಣ, ನರಸಿಂಹರಾಜ, ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಕೂಡ್ಲಿಗಿ, ಬಳ್ಳಾರಿ, ಬಳ್ಳಾರಿ ನಗರ, ಮಾನ್ವಿ, ರಾಯಚೂರು ಗ್ರಾಮೀಣ, ರಾಯಚೂರು, ದೇವದುರ್ಗ ಕ್ಷೇತ್ರಗಳಲ್ಲಿ ಸಾಗಿತ್ತು.
ಇವುಗಳಲ್ಲಿ ಗುಂಡ್ಲುಪೇಟೆ, ನಂಜನಗೂಡು, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮೂರು, ಕೂಡ್ಲಿಗಿ, ಬಳ್ಳಾರಿ ನಗರ, ದೇವದುರ್ಗ ಮೊದಲಾಗಿ 11 ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ಕಳೆದುಕೊಂಡಿದೆ. ರಾಯಚೂರು ಕ್ಷೇತ್ರವನ್ನು ಮಾತ್ರವೇ ತೀವ್ರ ಸ್ಪರ್ಧೆಯ ನಡುವೆ ಉಳಿಸಿಕೊಂಡಿದೆ. ಡಾ ಶಿವರಾಜ್ ಪಾಟೀಲ್ ಅವರು 2018ರಲ್ಲೂ ಈ ಕ್ಷೇತ್ರವನ್ನು ಗೆದ್ದಿದ್ದು, ಈ ಬಾರಿಯೂ ಶಾಸಕ ಸ್ಥಾನ ಉಳಿಸಿಕೊಂಡಿದ್ದಾರೆ.
ಉಳಿದಂತೆ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ದೇವದುರ್ಗಗಳನ್ನು ಬಿಜೆಪಿ ಜೆಡಿಎಸ್ಗೆ ಕಳೆದುಕೊಂಡಿದೆ. ಜೆಡಿಎಸ್ ತೆಕ್ಕೆಯಲ್ಲಿದ್ದ ಮಾನ್ವಿ, ನಾಗಮಂಗಲ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರಗಳು ಕಾಂಗ್ರೆಸ್ ಕಡೆಗೆ ವಾಲಿವೆ. 2018ರಲ್ಲಿ ಜೆಡಿಎಸ್ ಗೆದ್ದಿದ್ದ ಮೇಲುಕೋಟೆಯನ್ನು ಈ ಬಾರಿ ಎಸ್ಕೆಪಿ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಗೆದ್ದಿದ್ದಾರೆ.