ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿರುವ ಜಲಸಂಪನ್ಮೂಲ ಇಲಾಖೆಯ ಉಪ ವಿಭಾಗ ಕಚೇರಿಗಳಲ್ಲಿ 22 ಎಂಜಿನಿಯರ್ ಹುದ್ದೆಗಳು ಖಾಲಿ ಉಳಿದಿವೆ. ಈವರೆಗೆ ಆ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಪರಿಣಾಮ ತಾಲೂಕಿನಲ್ಲಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರ ಜಲಾಶಯದಿಂದ ತಂಗಭದ್ರ ಎಡದಂಡೆ ನಾಲಾ ಯೋಜನೆ ಮೂಲಕ ಮಾನ್ವಿ ಮತ್ತು ಸಿರವಾರವರೆಗೆ ಕೃಷಿ ಭೂಮಿಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ. ನಾಲಾ ಯೋಜನೆಯ ಕೊನೆಯ ಭಾಗವು (70-104 ಕಿ.ಮೀ) ಜಲಸಂಪನ್ಮೂಲ ಇಲಾಖೆಯ ಸಿರವಾರ ಮುಖ್ಯ ವಿಭಾಗಕ್ಕೆ ಒಳಪಡುತ್ತದೆ. ಈ ವಿಭಾಗವು ಸಿರವಾರ ಮತ್ತು ಮಾನ್ವಿ ತಾಲೂಕಿನ 20 ವಿತರಣಾ ನಾಲೆಗಳಿಗೆ ನೀರು ಹರಿಸುವುದನ್ನು ನಿರ್ವಹಿಸುವ ಜವಬ್ದಾರಿ ಹೊಂದಿದೆ.
ಆದರೆ, ಮಾನ್ವಿ ಉಪ ವಿಭಾಗದ ಕಚೇರಿಯಲ್ಲಿ 22 ಎಂಜಿನಿಯರ್ ಹುದ್ದೆಗಳು ಖಾಲಿ ಇರುವುದರಿಂದ ತಾಲೂಕಿನ ಕೃಷಿ ಭೂಮಿಗೆ ನೀರು ಸಿಗದಂತಾಗಿದೆ. ಹಲವು ನಾಲೆಗಳು ಬತ್ತಿ ಹೋಗಿವೆ. ಜೊತೆಗೆ, ಸಿರವಾರ ಕಚೇರಿಯಲ್ಲಿಯೂ ಐದು ಎಂಜಿನಿಯರ್ ಹುದ್ದೆಗಳು ಖಾಲಿ ಇವೆ.
ಈ ಸುದ್ದಿ ಓದಿದ್ದೀರಾ?: ಸಿಎಂ ಸಿದ್ದರಾಮಯ್ಯಗೆ ‘ದಲಿತ ರತ್ನ’ ಪ್ರಶಸ್ತಿ
ತುಂಗಭದ್ರ ನಾಲಾ ಯೋಜನೆಯ ವ್ಯಾಪ್ತಿಯಲ್ಲಿ ನಾಲೆಗಳ ಆರಂಭದ ಭಾಗದಲ್ಲಿ ಹಲವಾರು ಪ್ರದೇಶಗಳು ಅನಧಿಕೃತವಾಗಿ ನೀರಾವರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿವೆ. ಹೀಗಾಗಿ, ನಾಲೆಯ ಕೊನೆಯ ಭಾಗಕ್ಕೆ ನೀರು ಹರಿದುಬರುತ್ತಿಲ್ಲ. ಮಾನ್ವಿ ತಾಲೂಕಿನ ನಾಲೆಗಳು ನೀರು ಕಂಡು ವರ್ಷಗಳೇ ಕಳೆದಿವೆ. ಸರ್ಕಾರ ಮತ್ತು ಸ್ಥಳೀಯ ಶಾಸಕರು ಸಮರ್ಪಕ ನೀರಿನ ಹರಿವಿಗೆ ಕ್ರಮ ಕೈಗೊಳ್ಳಬೇಕು. ಖಾಲಿ ಇರುವ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಬೇಕು” ಎಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.