ʼತಮ್ಮ ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ವಿಫಲವಾಗಿದ್ದೀರಿʼ ಎಂದು ಆರೋಪಿಸಿರುವ ಗ್ರಾಮಸ್ಥರು, ಮತ ಪ್ರಚಾರಕ್ಕೆ ತೆರಳಿದ ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲರಿಗೆ ಘೇರಾವ್ ಹಾಕಿರುವ ಘಟನೆ ರಾಯಚೂರಿನ ಪೋತಗಲ್ ಗ್ರಾಮದಲ್ಲಿ ನಡೆದಿದೆ.
ರಾಯಚೂರು ವಿಧಾನಸಭಾ ಕ್ಷೇತ್ರದ ಪೋತಗಲ್, ಅಮರಾವತಿ ಗ್ರಾಮದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ಮಾಡಲು ತೆರಳಿದ್ದರು. ಈ ವೇಳೆ, ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿದ್ದಾರೆ.
“ಪೋತಗಲ್ ಮತ್ತು ಅಮರಾವತಿ ಗ್ರಾಮದಲ್ಲಿ ಚರಂಡಿ, ಶುದ್ಧ ಕುಡಿಯುವ ನೀರು ಹಾಗೂ ಮೂಲಸೌಕರ್ಯವಿಲ್ಲ. 5 ವರ್ಷವಾದರೂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಈಗ ಮತ್ತೆ ಮತ ಕೇಳಲು ಬಂದಿದ್ದೀರಾ” ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಾದಿಗರ ರಾಜಕೀಯವನ್ನು ಬಿಜೆಪಿಗೆ ಅನೈತಿಕವಾಗಿ ಅಡಮಾನ ಮಾಡಬೇಕೆ?: ಹನುಮೇಶ್ ಗುಂಡೂರು
ಗ್ರಾಮಸ್ಥರೊಂದಿಗೆ ಮಾತನಾಡಿದ ಶಾಸಕ ಡಾ.ಶಿವರಾಜ ಪಾಟೀಲ, “ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ನನಗೆ ಮತ ಹಾಕಿ” ಎಂದು ಮನವೊಲಿಸಲು ಮುಂದಾದರು. ಆದರೂ, ಅವರ ಮಾತಿಗೆ ಗ್ರಾಮಸ್ಥರು ಮಣಿಯಲಿಲ್ಲ. ಬಳಿಕ ಶಾಸಕರು ಸ್ಥಳದಿಂದ ಕಾಲ್ಕಿತ್ತರು.