ಗೋವು ಸಾಗಾಣಿಕೆ ವೇಳೆ ಇದ್ರೀಷ್ ಪಾಷ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಸಂಬಂಧ ರಾಜಸ್ಥಾನದಲ್ಲಿ ಬಂಧಿಸಲಾಗಿದ್ದ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಆರೋಪಿಗಳನ್ನು ಸಾತನೂರು ಪೊಲೀಸರು ಕನಕಪುರಕ್ಕೆ ಕರೆತಂದಿದ್ದು, ಏಪ್ರಿಲ್ 9ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ರಾಷ್ಟ್ರೀಯ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ, ಸುರೇಶ್ ಕುಮಾರ್, ಗೋಪಿ, ಪವನ್ ಕುಮಾರ್, ಪಿಲ್ಲಿಂಗ್ ಅಂಬಿಗಾರ್ ಬಂಧಿತ ಆರೋಪಿಗಳು.
ಎಫ್ಐಆರ್ ದಾಖಲಾದ ಐವರು ಆರೋಪಿಗಳನ್ನು ಕನಕಪುರದ ಜೆಎಂಎಫ್ಸಿ ನ್ಯಾಯಾಧೀಶರ ಮನೆಯಲ್ಲಿ ವಿಚಾರಣೆ ನಡೆಸಿದ್ದು, ಶಿವಮೊಗ್ಗದ ಇಬ್ಬರು ವಕೀಲರು ಪುನೀತ್ ಕೆರೆಹಳ್ಳಿ ತಂಡದ ಪರವಾಗಿ ವಕಾಲತ್ತು ವಹಿಸಿದೆ.
ಬೆಂಗಳೂರು ಮೂಲದ ನಿಶಾಂತ್ ಕುಶಾಲಪ್ಪ, ಉಮಾಶಂಕರ್ ಎಂಬ ವಕೀಲರು ವಕಾಲತ್ತು ವಹಿಸಿದ್ದು, ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಗಳನ್ನು ಏಳು ದಿನಗಳ ಕಾಲ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಪ್ರಧಾನ ಸಿವಿಲ್ ನ್ಯಾಯಾಧೀಶರು ಅಪ್ಪಣ್ಣ ಸವದಿ ಎದುರು ಆರೋಪಿಗಳನ್ನು ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆದಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ
ಕನಕಪುರ ತಾಲೂಕಿನ ಸಾತನೂರು ಬಳಿ ಮಾ.31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದಿದ್ದರು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ಇದ್ರೀಸ್ ಪಾಷಾ ಸಾವು ಪ್ರಕರಣ: ‘ಬೆಕ್ಕು ಮತ್ತು ಇಲಿ ಆಟ ಮುಗಿದಿದೆ’ ಎಂದ ಅಲೋಕ್ ಕುಮಾರ್
ಈ ವೇಳೆ ಕ್ಯಾಂಟರ್ನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರೆ, ವಾಹನದಲ್ಲಿದ್ದ ಇದ್ರೀಷ್ ಪಾಷ ಎಂಬುವರ ಮೃತ ದೇಹ ಘಟನೆ ನಡೆದ 200 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪುನೀತ್ ಕೆರೆಹಳ್ಳಿ ನೈತಿಕ ಪೊಲೀಸ್ಗಿರಿ ಮಾಡಿ ಇದ್ರಿಷ್ ಪಾಷಾರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ 3 ಎಫ್ಐಆರ್ ದಾಖಲಾಗಿತ್ತು. ಮೃತನ ಸಹೋದರನ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಿಸಿದ್ದರು.
ದೂರು ದಾಖಲಾಗುತ್ತಿದ್ದಂತೆಯೇ ಪುನೀತ್ ಕೆರೆಹಳ್ಳಿ ಹಾಗೂ ಇತರೆ ಆರೋಪಿಗಳು ನಾಪತ್ತೆಯಾಗಿದ್ದರು. ಸಾತನೂರು ಪೊಲೀಸರು ನಿರಂತರ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬುಧವಾರ (ಏ.5) ರಾಜಸ್ಥಾನದಲ್ಲಿ ಬಂಧಿಸಿದ್ದರು.