- ಆರ್ಪಿಐ ಡಾ.ಬಿ ಆರ್ ಅಂಬೇಡ್ಕರ್ ಸ್ಥಾಪನೆ ಮಾಡಿದ ಪಕ್ಷ
- ‘ಆರ್ಪಿಐಗೆ ಪಕ್ಷಕ್ಕೆ ಬೆಂಬಲ ನೀಡುವ ಅವಶ್ಯಕತೆ ಇದೆ‘
ಆರ್ಪಿಐ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)ನಿಂದ 2023 ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ 30 ಕ್ಷೇತ್ರಗಳಲ್ಲಿ ಅಭ್ಯಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್ ತಿಳಿಸಿದ್ದಾರೆ.
ಬೀದರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಡಾ.ಬಿ ಆರ್ ಅಂಬೇಡ್ಕರ್ ಅವರು ಸ್ಥಾಪನೆ ಮಾಡಿದ ಪಕ್ಷ ಆರ್ಪಿಐ. ಇಂದು ದೇಶದಲ್ಲಿ ಬಹುಜನರು ಅಧಿಕವಾಗಿ ಇದ್ದರೂ ಕೂಡ ರಾಜಕಾರಣದ ಪರಿಜ್ಞಾನ ಇಲ್ಲದ ಕಾರಣ ಪಕ್ಷ ಹಿಂದುಳಿದಿದೆ. ಅಂಬೇಡ್ಕರರ ಋಣ ತಿರಿಸಬೇಕಾದರೆ, ಅವರು ಸ್ಥಾಪಿಸಿರುವ ಆರ್ಪಿಐ (ಅಂಬೇಡ್ಕರ್) ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವ ಅವಶ್ಯಕತೆ ಇದೆ” ಎಂದು ಹೇಳಿದರು.
“ಸಂವಿಧಾನ ಬದಲಾವಣೆ ಯಾರಪ್ಪನಿಂದಲ್ಲೂ ಸಾಧ್ಯವಿಲ್ಲ. ಸಂವಿಧಾನ ಸರಿಯಾಗಿ ಅನುಷ್ಠಾನ ಆಗಬೇಕಾದರೆ ಶೋಷಿತರು, ದಲಿತರು, ಹೋರಾಟಗಾರರು ವಿಧಾನಸಭೆ ಮತ್ತು ಲೋಕಸಭೆಗೆ ಪ್ರವೇಶಿಸಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡುವುದರ ಜೊತೆಗೆ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ” ಎಂದರು.
“ಅಸ್ಪೃಶ್ಯತೆ ನಿವಾರಣೆ, ಆರ್ಬಿಐ ಸ್ಥಾಪನೆಯಲ್ಲಿ ಪ್ರಮುಖಪಾತ್ರ, ಮತದಾನದ ಹಕ್ಕು, ಮಹಿಳಾ ಸುಧಾರಣೆ, ಕಾರ್ಮಿಕರ ಹಿತಚಿಂತನೆ, ನೀರಾವರಿ ಅಭಿವೃದ್ಧಿ, ಪತ್ರಿಕೋಧ್ಯಮ, ಸಮಾಜ ಕಲ್ಯಾಣ ಯೋಜನೆಗಳು ಹಾಗೂ ವಿದ್ಯುತ್ ಶಕ್ತಿ ಉತ್ಪಾದನೆ ಪರಿಕಲ್ಪನೆ, ರಾಜಕೀಯವಾಗಿ ಆರ್ಪಿಐ ಸ್ಥಾಪನೆ – ಇವೆಲ್ಲವೂ ಅಂಬೇಡ್ಕರ್ ಸಾಹೇಬರ ಕೊಡುಗೆಗಳಾಗಿವೆ” ಎಂದು ತಿಳಿಸಿದರು.
“ನನಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೀಪಕ್ ಭಾವು ನಿಕಾಳಜೆ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಮೋಹನಲಾಲ್ ಪಾಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಮತ್ತು ಕರ್ನಾಟಕ ರಾಜ್ಯ ಘಟಕದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇನೆ” ಎಂದರು.
“ರಾಜ್ಯಾದ್ಯಂತ 30 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ಆ ಪೈಕಿ ಬೀದರ್ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನನಗೆ ಪಕ್ಷವು ಅವಕಾಶ ಕೊಟ್ಟರೆ ಬೀದರ್ ಉತ್ತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ದಲಿತ ವಿರೋಧಿ, ಡಾ. ಅಂಬೇಡ್ಕರ್ ವಿರೋಧಿಯಾದ ಶಾಸಕ ರಹೀಂ ಖಾನ್ ಅವರಿಗೆ ಈ ಬಾರಿ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಬೇಕು” ಎಂದು ಬೀದರ್ ಜನತೆಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ
“ಶಾಸಕರ ನಿಷ್ಕಾಳಜಿಯ ಕಾರಣದಿಂದ ಬೀದರ್ನಿಂದ 1,000 ಮನೆಗಳ ಅನುದಾನ ವಾಪಾಸ್ ಹೋಗಿದೆ. ಫೆಬ್ರವರಿ 19ರಂದು ನೆಹರೂ ಸ್ಟೇಡಿಯಂನಲ್ಲಿ ನಡೆದ ಅಂಬೇಡ್ಕರ್ ಸಾಹೇಬರ ಜೀವನಾಧಾರಿತ ಕ್ರಾಂತಿ ಸೂರ್ಯ ‘ಮಹಾನಾಟಕ’ ನಾಟಕ ಪ್ರದರ್ಶನ ಸಂದರ್ಭದಲ್ಲಿ ನಾವು ಆಹ್ವಾನಿಸಿದರೂ ಅವರು ಬಾರದೆ, ಅವಮಾನಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸದಾ ಅಂಬೇಡ್ಕರ್ ಸಾಹೇಬರ ಕುರಿತು ಮಾತನಾಡುವ ಶಾಸಕರು ಬಿಎಸ್ಪಿಯಿಂದ ಸ್ಪರ್ಧೆ ಮಾಡಿ, ರಾಜಕಾರಣ ಕಲಿತು ಅದೆ ಪಕ್ಷಕ್ಕೆ ದ್ರೋಹ ಬಗೆದು ಕಾಂಗ್ರೆಸ್ಗೆ ಪಲಾಯನ ಮಾಡಿದ್ದಾರೆ. ದಲಿತರ ಮೇಲೆ ಕಾಳಜಿ ಇದ್ದರೆ ಮೇಲ್ಜಾತಿಯ ವೀರಶೈವ ಜಂಗಮರ ಸುಳ್ಳು ಎಸ್ಸಿ ಬೇಡ ಜಂಗಮ ಪ್ರಮಾಣ ಪಡೆದರೂ ಏಕೆ ವಿರೋಧಿಸಿಲ್ಲ? ಮೂರು ಬಾರಿ ಶಾಸಕರಾದರೂ ಎಷ್ಟು ಮಂದಿ ದಲಿತ ಮತ್ತು ಶೋಷಿತರಿಗೆ ಸರ್ಕಾರದ ವತಿಯಿಂದ ಭೂಮಿ ಮಂಜೂರು ಮಾಡಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು” ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅಮರ ಅಲ್ಲಾಪೂರ, ಯುವ ಮುಖಂಡ ಪ್ರಕಾಶ ರಾವಣ ಇದ್ದರು.