ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಬಿಜೆಪಿ ವಿಕೃತಗೊಳಿಸಿದ್ದ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡಿ, ಸಾಂವಿಧಾನಿ ಮತ್ತು ವೈಜ್ಞಾನಿಕ ವಿಷಯಗಳನ್ನು ಸೇರಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅದರಂತೆ, ಈ ಬಾರಿ, 2023-24ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ಪುನಾರಂಭವಾಗುವ ಮುನ್ನವೇ ಪಠ್ಯಪುಸ್ತಕಗಳನ್ನು ಪರಿಷ್ಕರಿಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಕುವೆಂಪು, ಬಸವಣ್ಣ, ಪಂಪ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕಳ ಇತಿಹಾಸವುಳ್ಳ ಪಠ್ಯಗಳನ್ನು ತೆಗೆದು ಹಾಕಿತ್ತು. ಸಾವರ್ಕರ್ ಸೇರಿದಂತೆ ಕೋಮುವಾದಿ ವಿಷಯಗಳನ್ನು ಸೇರಿಸಿತ್ತು. ಅದನ್ನು ಪರಿಷ್ಕರಿಸುವಂತೆ ಖಾಸಗಿ ಶಾಲಾ ಒಕ್ಕೂಟ ‘ರುಪ್ಸಾ‘ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಒತ್ತಾಯಿಸಿದ್ದಾರೆ.
ಆದರೆ, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿರುವ ಪಠ್ಯಪುಸ್ತಕಗಳು ಮುದ್ರಣವಾಗಿದೆ ಎಂದು ತಿಳಿದುಬಂದಿದೆ. ಶಾಲೆ ಆರಂಭವಾಗುವ ಮೊದಲ ದಿನವೇ ಎಲ್ಲ ಶಾಲೆಗಳಿಗೂ ಪಠ್ಯಪುಸ್ತಕಗಳು ರವಾನೆಯಾಗಲಿವೆ ಎನ್ನಲಾಗಿದೆ. ಶಾಲೆಗಳು ಆರಂಭವಾಗಲು ಇನ್ನು ಕೇವಲ ಆರು ದಿನಗಳಷ್ಟೇ ಬಾಕಿ ಇವೆ. ಹೀಗಾಗಿ, ಈ ವರ್ಷದಲ್ಲೇ ಪಠ್ಯಪುಸ್ತಕಗಳು ಪರಿಷ್ಕರಣೆಯಾಗುವವೇ ಅಥವಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಬದಲಾಗುವವೇ ಎಂಬ ಗೊಂದಲ ಸೃಷ್ಟಿಯಾಗಿದೆ.