ಕಾಡಾನೆ ಸಮಸ್ಯೆಗೆ ಬಿಜೆಪಿ ಸರ್ಕಾರ ಕಾರಣವೇ ಹೊರತು, ಇಲ್ಲಿಯ ಶಾಸಕರಲ್ಲ ಎಂದು ಜೆಡಿಎಸ್ ಮುಖಂಡ ಯಾದ್ಗಾರ್ ಇಬ್ರಾಹಿಂ ಆರೋಪಿಸಿದರು.
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಡಾನೆ ಹಾಗೂ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಪ್ರತಿ ವಿಧಾನಸಭಾ ಅಧಿವೇಶನದಲ್ಲಿಯೂ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಧೋರಣೆಯಿಂದಾಗಿ ಕಾಡಾನೆ ಸಮಸ್ಯೆ ಹಾಗೂ ಇತರೆ ಸಮಸ್ಯೆಗಳಿಗೆ ಈವರೆಗೆ ಶಾಶ್ವತ ಪರಿಹಾರ ದೊರಕಿಲ್ಲ” ಎಂದು ಹೇಳಿದರು.
‘ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವಧಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿಲ್ಲ. ಕುಮಾರಸ್ವಾಮಿ ಬೇಲೂರು ಹಾಗೂ ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಮೂರು ಬಾರಿ ಗೆದ್ದಿರುವುದೇ ಸಜ್ಜನ ರಾಜಕಾರಣಿ ಎಂಬುದಕ್ಕೆ ಸಾಕ್ಷಿ. ಕ್ಷೇತ್ರದಲ್ಲಿ ಯಾವುದೇ ಕೆಲಸ ಆಗಿಲ್ಲವೆಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ” ಎಂದರು.
“ಸಕಲೇಶಪುರ ಕ್ಷೇತ್ರ ಎರಡು ತಾಲೂಕು, ಒಂದು ಹೋಬಳಿ ಕೇಂದ್ರವನ್ನು ಒಳಗೊಂಡು ಭೌಗೋಳಿಕವಾಗಿ ಸುಮಾರು 120 ಕಿ.ಮೀ. ವಿಸ್ತೀರ್ಣ ಹೊಂದಿದೆ. ಎಲ್ಲ ಗ್ರಾಮಗಳಲ್ಲಿಯೂ ಒಂದಲ್ಲಾ ಒಂದು ಅಭಿವೃದ್ಧಿ ಕೆಲಸಗಳು ಆಗಿವೆ. ಪಕ್ಕದ ಮೂಡಿಗೆರೆ, ಬೇಲೂರು, ಕೊಡಗು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವಂತಹ ಎಲ್ಲ ರಾಜ್ಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಬಿಜೆಪಿ ಸಮಾವೇಶದಲ್ಲಿ ನಷ್ಟ ಅನುಭವಿಸಿದ್ದ ವ್ಯಾಪಾರಿಗೆ ₹35,000 ಪರಿಹಾರ
“ಹಲವು ಗ್ರಾಮಗಳಿಗೆ ಸೇತುವೆಗಳು, ರಸ್ತೆಗಳು, ಶಾಲಾ ಕಾಲೇಜುಗಳ ಕಟ್ಟಡಗಳು, ಮಿನಿ ಬಸ್ ನಿಲ್ದಾಣಗಳು, ತಡೆಗೋಡೆಗಳು, ಸಮುದಾಯ ಭವನಗಳು, ಹೈಮಾಸ್ಟ್ ವಿದ್ಯುತ್ ದೀಪಗಳೂ ಸೇರಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ” ಎಂದು ಯಾದ್ಗಾರ್ ಇಬ್ರಾಹಿಂ ತಿಳಿಸಿದರು.
ಪುರಸಭಾ ಸದಸ್ಯ ಸಮೀರ್ ಖಾನ್, ಇಸ್ರಾರ್, ವಕೀಲ ಅಕ್ರಂ, ಮಿಲಾಫ್ ಖಲೀಲ್, ಆನೇಮಹಲ್ ಹಸೈನಾರ್, ಅಬ್ಬು ಇದ್ದರು.