- ಗಲಾಟೆಯಲ್ಲಿ ಹಲವು ಪೊಲೀಸರು ಮತ್ತು ಪ್ರತಿಭಟನಾಕಾರರಿಗೆ ಗಾಯ
- ಪ್ರತಿಭಟನಾಕಾರರನ್ನು ಚದುರಿಸಿ, ನಿಯಂತ್ರಣಕ್ಕೆ ತಂದ ಪೊಲೀಸರು
ರಾಜ್ಯ ಸರ್ಕಾರವು ಪರಿಶಿಷ್ಟರಿಗೆ ನೀಡಿರುವ ಒಳಮೀಸಲಾತಿಯನ್ನು ವಿರೋಧಿಸಿ ಶಿವಮೊಗ್ಗದ ಯಡಿಯೂರಪ್ಪನವರ ಮನೆ ಮುಂದೆ ನಡೆಯುತ್ತಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯ ಚಟಾಪಟಿ ನಡೆದು ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ರಚಿಸಲಾಗಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗವನ್ನು ರಾಜ್ಯ ಸರ್ಕಾರವು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪರಿಗಣಿಸಿ ಕೇಂದ್ರಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿತ್ತು.
ಇದನ್ನು ವಿರೋಧಿದ ಲಂಬಾಣಿ, ಭೋವಿ ಹಾಗೂ ಕೊರಚ ಸಮುದಾಯದ ನೂರಾರು ಜನರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಶಿಕಾರಿಪುರದ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಕೆಲವು ಪ್ರತಿಭಟನಾಕಾರರು ಯಡಿಯೂರಪ್ಪನವರ ಮನೆಗೆ ನುಗ್ಗಲು ಯತ್ನಿಸಿದಾಗ, ಪೊಲೀಸರು ಇವರನ್ನು ತಡೆಯಲು ಯತ್ನಿಸಿದರು. ಇದಕ್ಕೆ ಸಿಟ್ಟಾದ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್ ತಳಿ ಮುಂದಕ್ಕೆ ನುಗ್ಗಲು ಯತ್ನಿಸಿದರು.
ಯಡಿಯೂರಪ್ಪನವರ ನಿವಾಸದ ಮುಂದೆ ಟೈರ್ ಗಳನ್ನು ಸುಟ್ಟು ಮನೆ ಬಳಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿ, ಯಡಿಯೂರಪ್ಪನವರ ಪ್ರತಿಕೃತಿ ದಹನ ಮಾಡಿದಲ್ಲದೇ ಮನೆ ಮುಂದೆ ಕಟ್ಟಲಾಗಿದ್ದ ಬಿಜೆಪಿ ಪಕ್ಷದ ಬ್ಯಾನರ್ ಗಳನ್ನು ಹರಿದುಹಾಕಿದರು.
ಇದಕ್ಕೂ ಸೊಪ್ಪು ಹಾಕದ ಪೊಲೀಸರು ಪ್ರತಿಭಟನಾಕಾರರನ್ನು ಮತ್ತಷ್ಟು ಹಿಂದಕ್ಕೆ ಕಳುಹಿಸಿದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ, ಚಪ್ಪಲಿ ಹಾಗೂ ಕಲ್ಲುಗಳನ್ನು ಪೊಲೀಸರ ಮೇಲೆ ಹಾಗೂ ಯಡಿಯೂರಪ್ಪನವರ ಮನೆ ಮೇಲೆ ಎಸೆದರು.
ಯಡಿಯೂರಪ್ಪನವರು ಇತ್ತೀಚೆಗಷ್ಟೇ ಕಟ್ಟಿಸಿದ್ದ ಹೊಸ ಮನೆಯ ಗಾಜುಗಳು ಪುಡಿಪುಡಿಯಾಗಿದ್ದು, ಹಲವು ಪೊಲೀಸರು ಹಾಗೂ ಪ್ರತಿಭಟನಾ ನಿರತ ಮಹಿಳೆಯರೂ ಗಾಯಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.