ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಏತನೀರಾವರಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಕೊಡುಗೆ. ಆದರೆ, ಶ್ರವಣಬೆಳಗೊಳ ಶಾಸಕರು ತಮ್ಮ ಕೊಡುಗೆಯೆಂದು ಬಿಂಬಿಸಿಕೊಂಡು ಚುನಾವಣೆ ಲಾಭಕ್ಕೆ ಮುಂದಾಗಿದ್ದಾರೆ. ಅವರು ನಕಲಿ ಭಗೀರಥರು, ತಾಲೂಕಿಗೆ ಸಿದ್ಧರಾಮಯ್ಯ ಅವರು ನಿಜವಾದ ಭಗೀರಥರು ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ ಎ ಗೋಪಾಲಸ್ವಾಮಿ ಹೇಳಿದರು.
ಚನ್ನರಾಯಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಮತ್ತು ರೋಡ್ ಶೋ ವೇಳೆ ಮಾತನಾಡಿದ ಅವರು, “ತಾಲೂಕಿನಲ್ಲಿ ಪ್ರಥಮವಾಗಿ ನುಗ್ಗೇಹಳ್ಳಿ ಏತನೀರಾವರಿ ಯೋಜನೆ ಮೂಲಕ ಅಂಕುಶ ಇಟ್ಟವರು ಮಾಜಿ ಶಾಸಕ ಪುಟ್ಟೇಗೌಡರು. ನಾನು ಸಂಸದೀಯ ಕಾರ್ಯದರ್ಶಿ ಆಗಿದ್ದ ಕಾಲದಲ್ಲಿಯೇ ಎಚ್ ಸಿ ಶ್ರೀಕಂಠಯ್ಯ ಅವರು ಹಿಸಾವೆಗೆ ತೋಟ, ಕಲ್ಲೆಸೋಮನಹಳ್ಳಿ ಏತನೀರಾವರಿ ಯೋಜನೆಗಳನ್ನು ತಂದರು. ಮುಖ್ಯಮಂತ್ರಿಯಾಗಿದ್ದ ಸಿದ್ದಾರಾಮಯ್ಯ ಎಲ್ಲ ಯೋಜನೆಗಳಿಗೂ ಅನುದಾನ ನೀಡಿ ತಾಲೂಕಿನ ನೀರಾವರಿಗೆ ಒತ್ತುಕೊಟ್ಟರು. ಇಲ್ಲಿ ಶಾಸಕರಾಗಿದ್ದ ಬಾಲಕೃಷ್ಣ ಅವರು ತಾವೇ ಮಾಡಿಸಿದ್ದು ಎಂದು ಜನರನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ” ಎಂದು ಆರೋಪಿಸಿದರು.
ಅವರ ಕಾಲದಲ್ಲಿ ಅಭಿವೃದ್ಧಿಯಾಗಿರುವ ರಸ್ತೆಗಳೇ ಅಭಿವೃದ್ಧಿಯಾಗಿವೆ. ನರೇಗಾದಡಿ ಹಿಂಬಾಲಕರಿಗೆ ಗುತ್ತಿಗೆ ನೀಡಿದ್ದು ಅವರ ಸಾಧನೆ. ಇನ್ನೂ 125ಕ್ಕೂ ಹೆಚ್ಚು ಹಳ್ಳಿಗಳಲ್ಲಿ ರಸ್ತೆಗಳಿಲ್ಲ. ಇಲ್ಲಿಯ ಲೋಪಗಳನ್ನು ಸರಿಪಡಿಸುವುದಕ್ಕೆ ನನ್ನ ಮೊದಲ ಆದ್ಯತೆ. ಪಕ್ಷದ ಪ್ರಣಾಳಿಕೆಗಳು ನಮಗೆ ಬಲ ನೀಡಿವೆ. 400ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ಕಾರ್ಯಮುಗಿಸಿದ್ದು, ಆರು ಮಂದಿ ನಾಯಕರು ಒಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ತಟಸ್ಥರಾಗಿದ್ದ ಕಾರ್ಯಕರ್ತರೆಲ್ಲ ಕೆಲಸ ಮಾಡುತ್ತಿದ್ದು, ತಮ್ಮ ಗೆಲುವು ನಿಶ್ಚಿತ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ ಹೊಳೆನರಸೀಪುರ ಕ್ಷೇತ್ರ | ಬದಲಾವಣೆ ಬಯಸುತ್ತಿದ್ದಾರೆಯೇ ಮತದಾರರು?
ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಮಾತನಾಡಿ, “ರಾಜ್ಯ, ಜಿಲ್ಲೆ ನಾಯಕರಿಗೆ ಶ್ರವಣಬೆಳಗೊಳ ಮತ್ತು ಹೊಳೆನರಸೀಪುರ ಕ್ಷೇತ್ರಗಳ ಗೆಲುವಿನ ಮೇಲೆ ವಿಶ್ವಾಸವಿಲ್ಲ. ಬದಲಿಗೆ ನಮಗೆ ಭರವಸೆ ಇದೆ. ಇವೆರೆಡೂ ಕ್ಷೇತ್ರಗಳ ಗೆಲುವಿನ ಮೂಲಕ ಇಲ್ಲಿನ ಮತದಾರರು ರಾಜ್ಯಕ್ಕೆ ದೊಡ್ಡ ಸಂದೇಶ ನೀಡಲಿದ್ದಾರೆ. ಜನಕ್ಕೆ ಬದಲಾವಣೆ ಬೇಕಿದೆ. ಹಾಗಾಗಿ ಕಾಂಗ್ರೆಸ್ ಬೆಂಬಲಕ್ಕೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವ ಹಿನ್ನೆಲೆ ಇಲ್ಲಿನ ಅಭಿವೃದ್ಧಿಗಾಗಿ ಎಂ ಎ ಗೋಪಾಲಸ್ವಾಮಿ ಅವರನ್ನು ಆಯ್ಕೆ ಮಾಡಿ” ಎಂದು ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಎಂ ಶಂಕರ್, ಎಂ ಕೆ ಮಂಜೇಗೌಡ, ಯುವರಾಜ್, ವಿನೋದ್, ಮೋಹನ್, ಕಾರ್ತಿಕ್, ಕೆ ಜೆ ಬಾಬು, ಜನಾರ್ಧನ್, ಪ್ರಕಾಶ್, ಮಂಜುನಾಥ್ ಸೇರಿದಂತೆ ಇತರರು ಇದ್ದರು.