- ಸಚಿವ ಪ್ರಭು ಚವ್ಹಾಣ ಸೋಲಿಸಲು ಒಂದಾದ ತಂಡ
- ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ನಾಯಕರು
ಔರಾದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಕಳೆದ ಮೂರು ಅವಧಿಗೆ ಆಯ್ಕೆಯಾದ ಸಚಿವ ಪ್ರಭು ಚವ್ಹಾಣ ಅವರಿಂದ ತಾಲೂಕಿನಲ್ಲಿ ಭ್ರಷ್ಟಾಚಾರ, ಜಾತಿಯತೆ ಹಾಗೂ ದೀನ ದಲಿತರ ಮೇಲೆ ಅನ್ಯಾಯ ಮಿತಿಮೀರಿದೆ. ಈ ದುರಾಡಳಿತ ನಿರ್ಮೂಲನೆ ಮಾಡಲು ಪ್ರಭು ಚವ್ಹಾಣ ಅವರನ್ನು ಸೋಲಿಸುವುದು ಅನಿವಾರ್ಯವಾಗಿದೆ ಎಂದು ಏಕತಾ ಫೌಂಡೇಶನ್ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಸ್ವಾಮಿ ತಿಳಿಸಿದ್ದಾರೆ.
ಔರಾದ ಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್ ಸಿಂಧೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ನಾನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ ತನ್ನ ಸೋಲು ಖಚಿತ ಎಂದು ತಿಳಿದ ಸಚಿವ ಪ್ರಭು ಚವ್ಹಾಣ ಮೇಲಾಧಿಕಾರಿಗಳ ಮೇಲೆ ಒತ್ತಡ ಹೇರಿ ನನ್ನೊಬ್ಬನ ಬೇಡ ಜಂಗಮ ಪ್ರಮಾಣ ಪತ್ರ ರದ್ದುಗೊಳಿಸಿದ್ದಾರೆ. ಮೂರು ಬಾರಿ ಗೆದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗನ್ನು ಕೈಗೊಂಡಿಲ್ಲ. ಇದರಿಂದ ಪ್ರಭು ಚವ್ಹಾಣ ಅವರಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಸಿಂಧೆ ಅವರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಪ್ರಭು ಚವ್ಹಾಣ ಕರ್ನಾಟಕದವರಲ್ಲ
“ಔರಾದ ತಾಲೂಕಿನ ಎಲ್ಲ ಸಮುದಾಯದ ಮುಗ್ಧ ಕಾರ್ಯಕರ್ತರನ್ನು ಬಳಸಿಕೊಂಡು ಜಾತಿ ರಾಜಕಾರಣ ನಡೆಸಿ ಮೋಸ ಮಾಡಿದ್ದಾರೆ. ಇದರಿಂದ ತಾಲೂಕಿನ ಜನ ಬೇಸತ್ತು ಈ ಸಲ ಪ್ರಭು ಚವ್ಹಾಣ ಮುಕ್ತ ಔರಾದ ಮಾಡಲು ನಿರ್ಧರಿಸಿದ್ದಾರೆ” ಎಂದು ಹೇಳಿದರು.
“ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ್ ಸಿಂಧೆ ನಿವೃತ್ತ ಅಧಿಕಾರಿಯಾಗಿದ್ದು, ಸಾಕಷ್ಟು ಅನುಭವಿಗಳಿದ್ದಾರೆ. ಆದರೆ, ಅನಕ್ಷರಸ್ಥ ಪ್ರಭು ಚವ್ಹಾಣ ಕಾಂಗ್ರೆಸ್ ಅಭ್ಯರ್ಥಿ ಸಿಂಧೆ ಹೊರ ತಾಲೂಕಿನವರು ಎಂದು ಹೇಳುತ್ತಾರೆ. ಆದರೆ, ಖುದ್ದು ಪ್ರಭು ಚವ್ಹಾಣ ಅವರೇ ಕರ್ನಾಟಕದವರಲ್ಲ” ಎಂದು ತಿರುಗೇಟು ನೀಡಿದರು.
ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಕುಮಾರ್ ದೇಶಮುಖ ಕಾಂಗ್ರೆಸ್ ಸೇರ್ಪಡೆ
ಔರಾದ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಕುಮಾರ್ ದೇಶಮುಖ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಸಿಂಧೆ ಅವರಿಗೆ ಬೆಂಬಲ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? : ಬಳ್ಳಾರಿ | ಕಂಪ್ಲಿಯಲ್ಲಿ ಸ್ನಾತಕೋತ್ತರ ಪದವಿ ಕಾಲೇಜು ತೆರೆಯುವಂತೆ ಮನವಿ
ಈ ವೇಳೆ ಕುಮಾರ್ ದೇಶಮುಖ ಮಾತನಾಡಿ, “ಕಳೆದ 10 ವರ್ಷಗಳಿಂದ ಪ್ರಭು ಚವ್ಹಾಣ ಅವರೊಂದಿಗೆ ಬಿಜೆಪಿಯಲ್ಲಿದ್ದು ಗೆಲುವಿಗೆ ಶ್ರಮಿಸಿದ್ದೇನೆ. ಆದರೆ, ನಮಗೆ ಯಾವುದೇ ಗೌರವ ನೀಡಿಲ್ಲ. ಪ್ರಭು ಚವ್ಹಾಣ ಅವರ ಭ್ರಷ್ಟಾಚಾರ, ದುರಾಡಳಿತಕ್ಕೆ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ. ಮುಂದೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವೆ” ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನರಾವ ಸಿಂಧೆ ಮಾತನಾಡಿ, “ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕುಮಾರ್ ದೇಶಮುಖ ಸೇರಿದಂತೆ ಕನ್ನಡಪರ ಸಂಘಟನೆ ಹಾಗೂ ಸಂಬಾಜಿ ಬ್ರಿಗೇಡ್ ಪದಾಧಿಕಾರಿಗಳು ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದು, ನನಗೆ ಆನೆ ಬಲ ಬಂದಂತಾಗಿದೆ” ಎಂದು ಹೇಳಿದರು.
ಶಾಸಕನಾದರೂ ಸೇವಕನಾಗಿ ಕೆಲಸ ಮಾಡುವೆ
“ನಾನು ಶಾಸಕನಾಗಿ ಕೆಲಸ ಮಾಡಲು ಬಂದಿಲ್ಲ. ಒಮ್ಮೆ ಅವಕಾಶ ನೀಡಿದರೆ ತಾಲೂಕಿನಲ್ಲಿ ಯಾವುದೇ ಸಮುದಾಯದ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯದಂತೆ ಎಚ್ಚರವಹಿಸುವೆ. ಎಲ್ಲ ಜಾತಿ ಧರ್ಮದವರಿಗೆ ಸೌಲಭ್ಯ ಒದಗಿಸುವ ಮೂಲಕ ತಾಲೂಕಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡಲು ಶತಸಿದ್ಧ” ಎಂದು ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಪಂಚಯಿತಿ ಮಾಜಿ ಸದಸ್ಯ ಕಾಶಿನಾಥ್ ಜಾಧವ್, ರಮೇಶ್ ದೇವಕತ್ತೆ, ಸಂಬಾಜಿ ಬ್ರಿಗೇಡ್ ಮುಖಂಡ ಸತೀಶ್ ವಾಸರೆ, ಧನಾಜಿ ಜಾಧವ, ಔರಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಅನೇಕರು ಹಾಜರಿದ್ದರು.