ಬೇಸಿಗೆ ಬಂತೆಂದರೆ ಸಾಕು ಬೀದರ್ ಜಿಲ್ಲಾದ್ಯಂತ ರಣಬಿಸಿಲು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ತಾಪಮಾನದಿಂದ ಜಿಲ್ಲೆಯ ಜನತೆ ಅಕ್ಷರಶಃ ತತ್ತರಿಸಿದ್ದಾರೆ. ಅತಿಯಾದ ಧಗೆಯಿಂದ ಜನರು ಮನೆಯಿಂದ ಹೊರಬಾರದ ಪರಿಸ್ಥಿತಿಯಲ್ಲಿದರೆ, ಕಾಡಿನಲ್ಲಿ ವಾಸಿಸುವ ವನ್ಯ ಜೀವಿಗಳದ್ದು ಹೇಳತೀರದ ಸಂಕಟ. ಜೀವಜಲಕ್ಕಾಗಿ ಕಾಡಿನಿಂದ ನಾಡಿಗೆ ವಲಸೆ ಬರುವ ವನ್ಯ ಜೀವಿಗಳ ದಾಹ ನೀಗಿಸುವ ಕಾರ್ಯ ಈ ಕಾಲದ ಮಾನವೀಯತೆಗೆ ಸಾಕ್ಷಿಯಾಗಿದೆ.
ಬೀದರ್ ಜಿಲ್ಲೆಯ ‘ಸ್ವಾಭಿಮಾನಿ ಗೆಳೆಯರ ಬಳಗ’ದ ತಂಡವೊಂದು ವನ್ಯ ಜೀವಿಗಳ ಸಂರಕ್ಷಣೆಗಾಗಿ ಟೊಂಕಕಟ್ಟಿ ನಿಂತು ಸ್ವಯಂ ಪ್ರೇರಿತರಾಗಿ ವನ್ಯ ಜೀವಿಗಳ ದಾಹ ನೀಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಅರಣ್ಯ ಪ್ರದೇಶ, ಖಟಕ ಚಿಂಚೋಳಿ, ಹಾಲಹಳ್ಳಿ ಬ್ಯಾಲಹಳ್ಳಿ, ಹುಮನಾಬಾದ್ ತಾಲೂಕಿನ ನಿರ್ಣಾ, ಬೀದರ್ ತಾಲೂಕಿನ ಮನ್ನಳ್ಳಿ, ಶಹಾಪುರ ಅರಣ್ಯ ಪ್ರದೇಶ ಸೇರಿದಂತೆ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪ್ರದೇಶದ ಸುತ್ತಲಿನ ಪ್ರದೇಶದಲ್ಲಿ ಹತ್ತಾರು ನೀರಿನ ತೊಟ್ಟಿಗಳು ನಿರ್ಮಿಸಿ ಪ್ರಾಣಿಗಳ ದಾಹ ನೀಗಿಸುತ್ತಿದ್ದಾರೆ.
“ಜಿಲ್ಲೆಯ ನಾನಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳಿವೆ. ಆದರೆ, ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರಿತಪಿಸುತ್ತವೆ. ಸುಮಾರು 39-42° ರಷ್ಟು ತಾಪಮಾನ ದಾಖಲಾಗುತ್ತಿರುವ ಜಿಲ್ಲೆಯಲ್ಲಿ ಪ್ರಾಣಿಗಳು ಬದುಕುವುದಾದರೂ ಹೇಗೆ? ಇಂಥ ರಾಣ ಬಿಸಿಲಿಗೆ ಮೂಕ ಪ್ರಾಣಿಗಳ ಸಂರಕ್ಷಣೆಗೆ ‘ಸ್ವಾಭಿಮಾನಿ ಗೆಳೆಯರ ಬಳಗ’ ಮುಂದಾಗಿದ್ದು, ಎಲ್ಲೆಲ್ಲಿ ನೀರಿನ ಅವಶ್ಯಕತೆ ಇದೆಯೋ ಅಲ್ಲಿ ನೀರಿನ ತೊಟ್ಟಿ ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ” ಎಂದು ಸ್ವಾಭಿಮಾನಿ ಗೆಳೆಯರ ಬಳಗದ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಡಶೆಟ್ಟಿ ಈದಿನ.ಕಾಮ್ಗೆ ತಿಳಿಸಿದರು.
“ಜಿಲ್ಲೆಯಲ್ಲಿ 200 ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರಿದ್ದಾರೆ. ಪ್ರತಿ ತಿಂಗಳು 200 ರೂಪಾಯಿ ಸಂಗ್ರಹಿಸಿ ಸಾಮಾಜಿಕ ಕಾರ್ಯಗಳಿಗೆ ವ್ಯಯಿಸುತ್ತೇವೆ. ಸರ್ಕಾರ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳ ಸಹಕಾರವಿಲ್ಲದೆ ಸ್ವಯಂ ಪ್ರೇರಿತರಾಗಿ ಸಾಮಾಜಿಕ ಜವಾಬ್ದಾರಿ ಹೊತ್ತು ಹಲವು ರೀತಿಯಲ್ಲಿ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯಕ್ರಮ, ಉಚಿತ ನೋಟ್ ಬುಕ್ ವಿತರಣೆ, ಚಳಿಗಾಲದಲ್ಲಿ ವೃದ್ಧ, ಅನಾಥರಿಗೆ ಹೊದಿಕೆ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳು ಕೈಗೊಳ್ಳುತ್ತಿರುವ ಬಳಗದ ಸದಸ್ಯರು ಇದೀಗ ಮೂಕ ಪ್ರಾಣಿಗಳ ದಾಹ ತಣಿಸುವ ಸೇವೆ ಮನಸ್ಸಿಗೆ ಸಂತೃಪ್ತಿ ತಂದಿದೆ” ಎನ್ನುತ್ತಾರೆ.
ಆಯಾ ತಾಲೂಕಿನ ಬಳಗದ ಸದಸ್ಯರು ತಮ್ಮ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಸ್ವತಃ ಅವರೇ ಕೃತಕ ಸಿಮೆಂಟ್ ತೊಟ್ಟಿಗಳನ್ನು ಸಿದ್ಧಪಡಿಸಿ ಹಾಕುತ್ತಾರೆ. ಎರಡ್ಮೂರು ದಿನಕ್ಕೆ ಒಂದು ಬಾರಿ ನೀರು ಶೇಖರಿಸುತ್ತಾರೆ. 1500 ರಿಂದ 2000 ಲೀಟರ್ ನೀರಿನ ಟ್ಯಾಂಕ್ ಮೂಲಕ ಆಟೋದಲ್ಲಿ ತೆಗೆದುಕೊಂಡು ತೊಟ್ಟಿ ತುಂಬಿಸಿ ನೀರು ಖಾಲಿಯಾಗದಂತೆ ನೋಡುತ್ತಾರೆ.
ಕಾಡಿನಲ್ಲಿ ವಾಸಿಸುವ ನವಿಲು, ಜಿಂಕೆ, ತೋಳ, ಕಾಡುಹಂದಿ, ಹದ್ದು, ನರಿ, ಮಂಗ ಸೇರಿದಂತೆ ಅನೇಕ ಬಗೆಯ ವನ್ಯಜೀವಿಗಳು ತೊಟ್ಟಿಯಲ್ಲಿನ ನೀರು ಕುಡಿದು ದಾಹ ನೀಗಿಸುಕೊಳ್ಳುತ್ತಿವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಪರಿಸರ ಕಾಳಜಿಗಾಗಿ ಮಾಡುತ್ತಿರುವ ಕಾರ್ಯ ಎಂದು ಹೇಳುತ್ತಾರೆ.
ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಿ
“ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿದೆ, ವನ್ಯಜೀವಿಗಳ ಸಂಖ್ಯೆಯೂ ತಕ್ಕಮಟ್ಟಿಗೆ ಇದೆ. ಆದರೆ, ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆ ನಿರ್ಲಕ್ಷಿಸುತ್ತಿದೆ. ಮೂಕ ಪ್ರಾಣಿಗಳ ದಾಹ ನೀಗಿಸಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರೆ ಇಲಾಖೆಗೆ ಅನುದಾನದ ಕೊರತೆ ಬಗ್ಗೆ ಅಧಿಕಾರಿಗಳು ಉತ್ತರಿಸುತ್ತಾರೆ” ಎಂದು ಬಳಗದ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಡಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಶುಭ ಕೋರಿದ ಸಾಲಮರದ ತಿಮ್ಮಕ್ಕ
ಬೇಸಿಗೆಯ ರಣಬಿಸಿಲಿಗೆ ತತ್ತರಿಸಿ ಕಾಡಿನಿಂದ ನಾಡಿಗೆ ಬರಲಾಗದೆ ಒದ್ದಾಡುತ್ತಿರುವ ವನ್ಯಜೀವಿಗಳ ಮೌನ ರೋಧನೆ ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು ಆಲಿಸಿ ತಮ್ಮ ಸ್ವಂತ ದುಡಿಮೆಯ ಖರ್ಚಿನಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಿ ನೀರುಣಿಸುವ ಕಾರ್ಯ ಶ್ಲಾಘನೀಯ ಎಂದು ನಾಗರಿಕರು ಮಾತಾಡುತ್ತಿದ್ದಾರೆ.
ಧನ್ಯವಾದಗಳು 🙏