ರೈಲು ಅಪಘಾತ ಸಂದರ್ಭದ ತುರ್ತು ಪರಿಸ್ಥಿತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳವ ಕುರಿತು ತರಬೇತಿ ನೀಡಲು ಹರಿಹರ ರೈಲ್ವೆ ನಿಲ್ದಾಣದಲ್ಲಿ ಅಣುಕು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ರೈಲು ಅಪಘಾತವಾಗಿ ಬೋಗಿ ಒಂದರ ಮೇಲೆ ಇನ್ನೊಂದು ಬೋಗಿ ಬಿದ್ದ ಸಂದರ್ಭ ಮತ್ತು ಬೆಂಕಿ ಹೊತ್ತಿಕೊಂಡ ಸಂದರ್ಭಗಳ ಕುರಿತು ಪ್ರದರ್ಶನ ಮಾಡಲಾಗಿದೆ.
ಶುಕ್ರವಾರ ಬೆಳಿಗ್ಗೆ ಹರಿಹರ ರೈಲು ನಿಲ್ದಾಣದ ಯಾರ್ಡ್ ಸಮೀಪ ರೈಲ್ವೆ ಇಲಾಖೆ ಮೈಸೂರು ವಿಭಾಗದಿಂದ ವಾರ್ಷಿಕ ವಿಪತ್ತು ನಿರ್ವಹಣೆ ಸಮಿತಿ ಅಣಕು ಪ್ರದರ್ಶನ ನಡೆಸಿದೆ. ಅಪಾಯದ ಸಮಯದಲ್ಲಿ ಸಾಧ್ಯವಾದಷ್ಟು ತ್ವರಿತವಾಗಿ ಸೂಕ್ತ ಸಹಾಯ ನೀಡುವ ಮೂಲಕ ಅಮೂಲ್ಯ ಮಾನವ ಜೀವ ಮತ್ತು ಸಂಭಾವ್ಯ ಆಸ್ತಿ ನಷ್ಟಗಳನ್ನು ಕಡಿಮೆ ಮಾಡುವ ಅಥವಾ ಸಂಪೂರ್ಣವಾಗಿ ತಪ್ಪಿಸುವ ಗುರಿಯನ್ನು ಹೊಂದಿದೆ.
ಶುಕ್ರವಾರ ಬೆಳಿಗ್ಗೆ 10.15ಕ್ಕೆ ಹರಿಹರ ನಿಲ್ದಾಣದಲ್ಲಿ ಅರಸೀಕೆರೆಯಿಂದ ಹಾವೇರಿಗೆ ಹೋಗುವ ವಿಶೇಷ ರೈಲಿನ ಎಸ್ಡಬ್ಲ್ಯೂಆರ್ 01435 ಮತ್ತು ಎಸ್ಡಬ್ಲ್ಯೂಆರ್ 14242 ಎಂಬ ಎರಡು ಜನರಲ್ ಕೋಚ್ಗಳನ್ನು ಹಳಿತಪ್ಪಿ ಮಗುಚಿ ಬಿದ್ದಿರುವಂತೆ ದೃಶ್ಯ ಸೃಷ್ಠಿಸಿ ಅಣುಕು ಪ್ರದರ್ಶನ ಪ್ರಾರಂಭವಾಯಿತು. ಘಟನೆಯ ಸಂದೇಶ ತಿಳಿದ ಕೂಡಲೇ ರೈಲ್ವೆ ಅಧಿಕಾರಿಗಳು ನಿಗದಿತ ಮಾರ್ಗಸೂಚಿಗಳ ಪ್ರಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ದಾವಿಸುದನ್ನು ತೋರಿಸಲಾಯಿತು.
ಅಣುಕು ಪ್ರದರ್ಶನ ಹೀಗಿತ್ತು
ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಮತ್ತು ಇತರ ಅಧಿಕಾರಿಗಳು ಮೈಸೂರಿನ ನಿಯಂತ್ರಣಾ ಕಚೇರಿಯಿಂದ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು. 23 ಸಿಬ್ಬಂದಿಯನ್ನು ಒಳಗೊಂಡ ಸಹಾಯಕ ಕಮಾಂಡೆಂಟ್ ಸೆಂಥಿಲ್ ಕುಮಾರ್ ನೇತೃತ್ವದಲ್ಲಿ ಎನ್ಡಿಆರ್ಎಫ್ ತಂಡ, ಎಸ್ಎನ್ ಕಿರಣ್ ಕುಮಾರ್ ನೇತೃತ್ವದ ಎಸ್ಡಿಆರ್ಎಫ್ ತಂಡ ಮತ್ತು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸೋಮಶೇಖರ್ ನೇತೃತ್ವದ ಜಿಲ್ಲಾ ಅಗ್ನಿಶಾಮಕ ದಳದ ತಂಡವೂ ಅವರಿಗೆ ಸೂಚನೆ ನೀಡಿದ 20 ನಿಮಿಷಗಳಲ್ಲಿ ಅಪಘಾತ ಸ್ಥಳಕ್ಕೆ ತಲುಪಿತು. ಸುಮಾರು 110 ನಿಮಿಷಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿತು.
“ರೈಲು ಅಪಘಾತವಾದಾಗ ಸ್ಥಳಕ್ಕೆ ವೈದ್ಯಕೀಯ, ಹಲವು ತಂತ್ರಜ್ಞರ ತಂಡವನ್ನು ಕರೆಸುವುದು, ಅಲ್ಲಿ ಬೋಗಿಗಳಲ್ಲಿ ಸಿಲುಕಿದ ಪ್ರಯಾಣಿಕರು, ಗಾಯಾಳುಗಳನ್ನು ಹೊರ ತೆಗೆದು ತುರ್ತು ಚಿಕಿತ್ಸೆ ನೀಡುವುದು, ಪ್ರಯಾಣಿಕರು ಹೊರ ಬರಲಾಗದಿದ್ದರೆ, ಬೋಗಿಯ ಬಾಡಿಯನ್ನು ಕತ್ತರಿಸಿ ಹೊರ ಬರಲು ಅನುವು ಮಾಡುವುದು, ಕತ್ತಲು ಇದ್ದರೆ ಅಲ್ಲಿ ಬೆಳಕಿನ ವ್ಯವಸ್ಥೆ, ಊಟೋಪಚಾರ, ಸಾರಿಗೆ, ಹೆಲ್ಪ್ ಡೆಸ್ಕ್ ಮಾಡುವುದು ಹೇಗೆಂದು ಭಾಗವಹಿಸಿದ್ದ ಸುಮಾರು 300 ಸಿಬ್ಬಂದಿಗೆ ಪರಿಚಯಿಸಲಾಯಿತು” ಎಂದು ಸಹಾಯಕ ವಿಭಾಗೀಯ ವ್ಯವಸ್ಥಾಪಕಿ ಎಸ್.ಎಸ್. ವಿಜಯಾ ಸುದ್ದಿಗಾರರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಿಎಂ ಆಗಿ ಸಿದ್ದರಾಮಯ್ಯ ಆಯ್ಕೆ; ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ
“ಪ್ರತಿ ವರ್ಷ ಮೈಸೂರು ರೈಲು ನಿಲ್ದಾಣ ಸಮೀಪದ ಅಶೋಕ್ ನಗರ ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ನಡೆಸುತ್ತಿದ್ದೆವು. ಪ್ರಥಮ ಬಾರಿಗೆ ಹರಿಹರದಲ್ಲಿ ಇದನ್ನು ಆಯೋಜಿಸಿದ್ದೇವೆ. ವಿಪತ್ತು ನಿರ್ವಹಣೆಗೆ ಮೀಸಲಿಟ್ಟ ಪರಿಕರಗಳ ಕಾರ್ಯಕ್ಷಮತೆಯೂ ಈ ಮೂಲಕ ತಿಳಿದುಬಂತು” ಎಂದರು.
ಹಿರಿಯ ವಿಭಾಗೀಯ ರಕ್ಷಣಾಧಿಕಾರಿ ಬಾಫ್ನಾ, ಸಹಾಯಕ ವಾಣಿಜ್ಯ ವ್ಯವಸ್ಥಾಪಕ ಉಮೇಶ್ ನಾಯ್ಕ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಮೋಹನ, ರೈಲ್ವೆ ಹಿರಿಯ ವೈದ್ಯಾಧಿಕಾರಿ ಡಾ.ರೆಡ್ಡಿ, ರೈಲ್ವೆ ರಕ್ಷಣಾ ದಳ, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಇದ್ದರು.