ಆರೋಗ್ಯದ ಏರುಪೇರಿನಿಂದಾಗಿ ಆಸ್ಪತ್ರೆಗೆ ದೌಡಾಯಿಸಿದರೆ, ವೈದ್ಯರ ಬದಲಾಗಿ ಡಿ ಗ್ರೂಪ್ ನೌಕರ ಚಿಕಿತ್ಸೆ ನೀಡುತ್ತಿದ್ದಾರೆಂಬ ಆರೋಪ ತುಮಕೂರು ಜಿಲ್ಲೆಯ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಕೇಳಿಬಂದಿದೆ.
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ಜಿಲ್ಲಾ ಆರೋಗ್ಯ ಅಧಿಕಾರಿ ಈ ಬಗ್ಗೆ ಯಾವುದೇ ರೀತಿಯ ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
“ಕೀಲು ಮೂಳೆಗೆ ಸಂಬಂಧಿಸಿದ ರೋಗಿಗಳಿಗೆ ಡಿ ಗ್ರೂಪ್ ನೌಕರ ಮದಕರಿ ನಾಯಕ ಎಂಬಾತ ಚಿಕಿತ್ಸೆ ನೀಡುತ್ತಿದ್ದಾನೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ತಾನೇ ಮುಂದಾಗಿ ಚಿಕಿತ್ಸೆ ನೀಡುತ್ತಿರುವುದರಿಂದ ಚಿಕಿತ್ಸೆಗೆಂದು ಬಂದವರಿಗೆ ಗಾಬರಿಯಾಗುತ್ತಿದ್ದು, ಇದನ್ನು ಯಾರಿಗೆ ಪ್ರಶ್ನೆ ಮಾಡುವುದು ಎಂಬುದೇ ತಿಳಿಯುತ್ತಿಲ್ಲ” ಎಂದು ನಾಗರಿಕರು ಅವಲತ್ತುಕೊಂಡಿದ್ದಾರೆ.
“ನಮಗೆ ಚಿಕಿತ್ಸೆ ನೀಡಲು ವೈದ್ಯರನ್ನು ಕರೆಯಿರಿ, ಅವರು ಎಲ್ಲಿ ಹೋದರು? ಎಂದು ರೋಗಿಗಳು ಪ್ರತಿರೋಧ ಒಡ್ಡಿದರೆ, ʼಈಗ ನಾನೇ ಡಾಕ್ಟರ್, ಟ್ರಿಟ್ಮೆಂಟ್ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಿ, ಇಲ್ಲಾ ಅಂದ್ರೆ ಹೋಗಿʼ ಎಂದು ತೀವ್ರ ಕಟುವಾಗಿ ವರ್ತಿಸುತ್ತಿದ್ದಾನೆ” ಎಂದು ರೋಗಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆರ್ಥೋಪೆಡಿಕ್ ವೈದ್ಯರ ದೀರ್ಘ ರಜೆ
ಆರ್ಥೋಪೆಡಿಕ್ ವೈದ್ಯರು ದೀರ್ಘ ರಜೆಯಲ್ಲಿ ತೆರಳಿದ್ದಾರೆ. ಆದರೆ, ಇಲ್ಲಿ ಬದಲಿ ವೈದ್ಯರನ್ನು ನಿಯೋಜನೆ ಮಾಡಿಲ್ಲ. ವೈದ್ಯರ ಕೊರತೆಯಿಂದಾಗಿ ಡಿ ಗ್ರೂಪ್ ನೌಕರ ತಾನೇ ಚಿಕಿತ್ಸೆ ನೀಡುತ್ತಿದ್ದಾನೆ. ಪಾವಗಡ ಆಸ್ಪತ್ರೆಯ ಈ ಅವ್ಯವಸ್ಥೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಡಿ ಗ್ರೂಪ್ ನೌಕರ ಆಸ್ಪತ್ರೆಗೆ ಬರುವ ರೋಗಿಗಳಿಗೆ ಎಕ್ಸ್-ರೇ ತೆಗೆದು, ಅದರಲ್ಲಿ ತನಗೆ ಕಂಡಿದ್ದನ್ನು ತೋರಿಸಿ ವಿವರಣೆ ನೀಡುವ ಈತ, ರೋಗಿಗಳಿಗೆ ಪೆಟ್ಟಾದ ಕಾಲು, ಇಲ್ಲವೇ ಕೈಗಳಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಕೂಡ ಹಾಕುತ್ತಾನೆಂಬ ಆರೋಪ ಕೇಳಿಬಂದಿದೆ.
ಕ್ರಮ ಕೈಗೊಳ್ಳದ ಡಿಎಚ್ಒ
ಜಿಲ್ಲೆಯ ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಎಷ್ಟು ವೈದ್ಯರಿದ್ದಾರೆ? ಅವರು ರಜೆಯಲ್ಲಿದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಏನು ಮಾಡಬೇಕು? ಬದಲಿ ವೈದ್ಯರನ್ನು ವಾರಕ್ಕೆ ಒಮ್ಮೆಯೋ, ಎರಡು ಬಾರಿಯೋ ನಿಯೋಜನೆ ಮಾಡಲು ಏಕೆ ಮುಂದಾಗಿಲ್ಲ ಎಂಬ ಪ್ರಶ್ನೆಗಳು ಎದುರಾಗಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಡಿಎಚ್ಒ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಅವರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
“ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಿರುತ್ತಾರೆ. ಹೀಗೆ ಬಂದಾಗ ತಜ್ಞರಲ್ಲದ, ಅದರಲ್ಲೂ ವೈದ್ಯರೇ ಅಲ್ಲದ ಡಿ ಗ್ರೂಪ್ ನೌಕರ ಚಿಕಿತ್ಸೆ ನೀಡಿದರೆ ಹೇಗೆ? ಒಂದು ವೇಳೆ ಜೀವಕ್ಕೆ ಏನಾದರೂ ಅಪಾಯವಾದರೆ? ಅಥವಾ ಅಂಗಾಗ ಊನಗೊಂಡರೆ ಏನು ಗತಿ?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.