ʼಭೂಮಿ ವಸತಿ ಕೊಡದೆ, ನಮ್ಮ ವೋಟು ಕೊಡೆವುʼ ಎಂಬ ಅಭಿಯಾನದೊಂದಿಗೆ ಹೋರಾಟ ಪ್ರಾರಂಭಿಸಿದ್ದೇವೆ. ನಾವುಗಳು ವಾಸವಿರುವ ಜಾಗಗಳಲ್ಲಿ ಮತ್ತು ಪ್ರತಿ ಗುಡಿಸಲುಗಳಿಗೆ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿದ್ದೇವೆ ಎಂದು ಅಲೆಮಾರಿ ಸಮುದಾಯದ ನಾಗರಾಜು ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಭೂಮಿ-ವಸತಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ನೇತೃತ್ವದಲ್ಲಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಂದಿಜೋಗಿ ಸಮುದಾಯದ ಅನೇಕ ಕುಟುಂಬಗಳು ಹಾಗೂ ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲಿಕುಂಟೆ ಗ್ರಾಮದ ಅಲೆಮಾರಿ ಕುಟುಂಬಗಳು ಹಾಗೂ ತಾಲೂಕಿನ ಇತರೆ ಹೋಬಳಿಯ ಅಲೆಮಾರಿ ಕುಟುಂಬಗಳು ಹಲವಾರು ವರ್ಷಗಳಿಂದ ಸೂರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ಇದೂವರೆಗೂ ತಮಗೆ ಸೂರು ಸಿಕ್ಕಿಲ್ಲ” ಎಂದು ಅವರು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತೊಪಡಿಸಿದ್ದಾರೆ.
“ಮುಂಗಾರು ಪೂರ್ವ ಮಳಗೆ ಗುಡಿಸಲುಗಳು ತುಂಬಿಕೊಂಡು ಒಳಗಡೆ ಇರಲಾಗದೆ ಪರಿತಪಿಸುವಂತಾಗಿದೆ. ಕಳೆದ ವರ್ಷವೂ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ತಿಮ್ಲಾಪುರ ಕೆರೆ ತುಂಬಿದ ಕಾರಣ ನಮ್ಮ ಗುಡಿಸಲುಗಳು ಕೆರೆಯಂತಾದವು” ಎಂದು ನೆನಪಿಸಿಕೊಂಡರು.
“ಭೂಮಿ, ವಸತಿ ಹಕ್ಕು ಹೋರಾಟಗಾರರು ಭೇಟಿ ನೀಡಿ, ನಮ್ಮನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು. 3ರಿಂದ 4 ತಿಂಗಳುಗಳ ಕಾಲ ಗಂಜಿಕೇಂದ್ರದಲ್ಲಿಯೇ ಕಾಲ ಕಳೆದೆವು. ಅಂದು ಬಾರದ ರಾಜಕಾರಣಿಗಳು, ಜನಪ್ರತಿನಿಧಿಗಳು ಇಂದು ನಮ್ಮ ಗುಡಿಸಲುಗಳ ಬಳಿ ಬರುತ್ತಿದ್ದಾರೆ” ಎಂದರು.
“ಹಲವು ವರ್ಷಗಳಿಂದ ಸೂರಿಗಾಗಿ ಅಲೆದರೂ ತಲೆಕೆಡಿಸಿಕೊಳ್ಳದ ಜನಪ್ರತಿನಿಧಿಗಳು ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಗುಡಿಸಲುಗಳ ಬಳಿ ಬರುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷದ ನಾಯಕರು ನಮ್ಮ ವೋಟು ಕೇಳಲು ಬರುವುದಾದರೆ, ಭೂಮಿ ವಸತಿ ಹಕ್ಕುಪತ್ರಗಳನ್ನು ನೀಡುವುದಾಗಿ ಕರಾರು ಪತ್ರಕ್ಕೆ ಸಹಿ ಹಾಕಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ದರ್ಗಾದ ಪ್ರವೇಶ ದ್ವಾರಕ್ಕೆ ತಡೆಗೋಡೆ ನಿರ್ಮಾಣ; ತೆರವುಗೊಳಿಸುವಂತೆ ಒತ್ತಾಯ
“ನಿವೇಶನ ಮತ್ತು ವಸತಿಗಾಗಿ ಜನಪ್ರತಿನಿಧಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಸೂರು ಕಲ್ಪಿಸಿಕೊಡಲು ಅಲೆದು ಕಂಗಾಲಾಗಿದ್ದೇವೆ. ಹಾಗಾಗಿ, ಈ ಬಾರಿ 2023ನೇ ಮೇ 10ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು, ಮುಖಂಡರುಗಳು ನಮ್ಮಲ್ಲಿ ಮತ ಕೇಳಲು ಬಂದಾಗ ನಾವುಗಳು ನಮ್ಮ ಮತಗಳನ್ನು ಹಣ, ಹೆಂಡಕ್ಕೆ ಮಾರಿಕೊಳ್ಳಬಾರದು. ಭೂಮಿ, ವಸತಿ ಕೊಡದೆ ನಾವು ನಮ್ಮ ಮತಗಳನ್ನು ನೀಡಬಾರದೆಂದು ತೀರ್ಮಾನಿಸಿದ್ದೇವೆ” ಎಂದರು.
ನಮ್ಮ ಮತಗಳು ಬೇಕಾದವರು ಚುನಾವಣೆಯಲ್ಲಿ ಜಯಶೀಲರಾದ ಬಳಿಕ ಭೂಮಿ, ವಸತಿ ನೀಡುತ್ತೇವೆಂದು ಕರಾರಿನೊಂದಿಗೆ ಬಂದಲ್ಲಿ ಮತ ನೀಡುತ್ತೇವೆ” ಎಂದು ತಿಳಿಸಿದರು.
ʼಭೂಮಿ ವಸತಿ ಕೊಡದೆ ನಮ್ಮ ವೋಟು ಕೊಡೆವುʼ ಎಂಬ ಅಭಿಯಾನ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಆರಂಭವಾಗಲಿ ಎಂದಿದ್ದಾರೆ.