ಬೆಂಗಳೂರು ಹೊರವಲಯದ ಹೋಟೆಲ್ ಒಂದರಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಇಬ್ಬರು ದಲಿತರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಮತ್ತು ದಲಿತ ಮುಖಂಡರು ರಾಜಾನುಕುಂಟೆ ಪೊಲೀಸ್ ಠಾಣೆ ಎದುರು ಮೃತದೇಹವಿಟ್ಟು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.
ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿಯ ದಲಿತ ನಿವಾಸಿಗಳಾದ ನಾಗರಾಜ್ ಹಾಗೂ ರಾಮಯ್ಯ ಎಂಬುವರನ್ನು ಜಾತಿ ವೈಷಮ್ಯದ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಇವರಿಬ್ಬರು ಕೆಲವು ದಿನಗಳ ಹಿಂದೆ ಹೆಸರುಘಟ್ಟದ ಹೋಟೆಲ್ವೊಂದರಲ್ಲಿ ನೀರು ಕುಡಿದಿದ್ದರು. ಆಗ ಅದೇ ವಿಚಾರಕ್ಕೆ ಜಗಳವಾಗಿತ್ತು. ಅದಾದ ಇಪ್ಪತ್ತು ದಿನಗಳ ನಂತರ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಾತಿಯ ವಿಚಾರಕ್ಕೆ ಕಾರು ಹತ್ತಿಸಿ ಅಪಘಾತವೆಂಬಂತೆ ಬಿಂಬಿಸಿ ಹಾಡಹಾಗಲೇ ಹತ್ಯೆ ಮಾಡಿದ್ದಾರೆ. ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೃತರ ಸಂಬಂಧಿ ವೆಂಕಟೇಶ್ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಇಪ್ಪತ್ತು ದಿನಗಳ ಹಿಂದೆ ಹೆಸರುಘಟ್ಟದ ಹೋಟೆಲ್ವೊಂದರಲ್ಲಿ ನಾಗರಾಜ್ ನೀರು ಕುಡಿದಿದ್ದಕ್ಕೆ ರೌಡಿಶೀಟರ್ ಭರತ್ ಎಂಬಾತ ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಚುನಾವಣೆ ಮುಗಿದ ಬಳಿಕ ಕೊಲೆ ಮಾಡುವುದಾಗಿ ಬಹಿರಂಗ ಬೆದರಿಕೆಯನ್ನೂ ಹಾಕಿದ್ದ. ಆತನೇ ನಾಗರಾಜ್ ಮತ್ತು ರಾಮಯ್ಯರನ್ನು ಹತ್ಯೆಗೈದಿದ್ದಾನೆ. ಆತನೊಂದಿಗೆ ನಿಶಾಂತ್ ಮತ್ತು ವಿನಯ್ ಎಂಬುವರ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ವಿವರಿಸಿದ್ದಾರೆ.
“ಗುರುವಾರ ಮುಂಜಾನೆ ನಾಗರಾಜ್, ರಾಮಯ್ಯ ಹಾಗೂ ಗೋಪಾಲ್ ಎಂಬುವರು ಒಂದೇ ಬೈಕ್ನಲ್ಲಿ ಕೆಎಂಎಫ್ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಆಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ನಾಗರಾಜ್ ಮತ್ತು ರಾಮಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ” ಎಂದು ವೆಂಕಟೇಶ್ ತಿಳಿಸಿದ್ದಾರೆ.
“ಅಪಘಾತ ಮಾಡುವ ಉದ್ದೇಶದಿಂದಲೇ ಕಾರನ್ನು ರೌಡಿಶೀಟರ್ ಭರತ್, ನಿಶಾಂತ್, ವಿನಯ್ ಸೇರಿದಂತೆ ಇತರರು ಶರವೇಗವಾಗಿ ಚಲಾಯಿಸಿಕೊಂಡು ಬಂದು ಡಿಕ್ಕಿಹೊಡೆದಿದ್ದಾರೆ. ಉದ್ದೇಶ ಪೂರಕವಾಗಿ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ” ಎಂದು ವೆಂಕಟೇಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ದೇವಸ್ಥಾನದಲ್ಲಿ ಯುವತಿಗೆ ಲೈಂಗಿಕ ಕಿರುಕುಳ; ದೂರನ್ನೇ ತಿರುಚಿದ ಪೊಲೀಸರು
ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಪ್ರತಿಕ್ರಿಯಿಸಿ, “ಉದ್ದೇಶ ಪೂರಕವಾಗಿಯೇ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದರೆ, ಇದು ಕೊಲೆಯೆಂದೇ ಹೇಳಬಹುದಾಗಿದೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಆದರೆ, ಇಂತಹ ಭಯಾನಕ ಕೃತ್ಯವೆಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಹೋರಾಟ ಮುಂದುವರೆಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಪ್ರತಿಕ್ರಿಯಿಸಿ, “ಘಟನೆಗೆ ಸಂಬಂಧಿಸಿದಂತೆ ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಘಟನೆಗೆ ಕಾರಣನಾದ ಭರತ್ ಮತ್ತು ಆತನ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.