ಕಾರವಾರ ಬಂದರಿನಲ್ಲಿ ರಾಶಿ ಹಾಕಿದ್ದ ಕಬ್ಬಿಣದ ಅದಿರು ಹದಿಮೂರು ವರ್ಷಗಳ ನಂತರ ಚೀನಾದತ್ತ ಸಾಗುತ್ತಿದೆ. 2010ರಲ್ಲಿ ಅಕ್ರಮವಾಗಿ ಅದಿರು ಸಾಗಾಟ ನಡೆಸುತ್ತಿದೆ ಎಂಬ ಆರೋಪದ ಮೇಲೆ ಬಂದರಿನ ಮೇಲೆ ದಾಳಿ ಮಾಡಿದ್ದ, ಅರಣ್ಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅದಿರನ್ನು ಜಪ್ತಿ ಮಾಡಿದ್ದರು.
ಜಪ್ತಿ ಮಾಡಿದ್ದ 50,000 ಮೆಟ್ರಿಕ್ ಟನ್ ಅದಿರನ್ನು 18 ರಾಶಿಗಳಲ್ಲಿಡಲಾಗಿತ್ತು. ಆ ಅದಿರನ್ನು ಸುಪ್ರೀಂ ಕೋರ್ಟ್ ನಿರ್ದೇಶದ ಮೇಲೆ ಹರಾಜು ಹಾಕಲಾಗಿತ್ತು. ಹರಾಜು ಪ್ರಕ್ರಿಯೆಲ್ಲಿ16 ರಾಶಿಗಳು ಅಂದರೆ 37,320 ಮೆಟ್ರಿಕ್ ಟನ್ ಅದಿರನ್ನ ಮಂಗಳೂರಿನ ಗ್ಲೋರಿ ಶಿಪ್ಪಿಂಗ್ ಸಂಸ್ಥೆ ಪಡೆದುಕೊಂಡಿದೆ. ಆ ಅದಿರನ್ನು ಚೀನಾಗೆ ರಫ್ತು ಮಾಡುತ್ತಿದೆ.
ಉಳಿದ 2 ರಾಶಿ ಅಂದರೆ 12,680 ಮೆಟ್ರಿಕ್ ಟನ್ ಅದಿರನ್ನು ವೇದಾಂತ ಸೆಸೆಗೋವಾ ಕಂಪನಿ ಖರೀದಿಸಿದೆ. ಆದರೆ, ಕಂಪನಿಯು ಇನ್ನೂ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಆ ಎರಡು ರಾಶಿಗಳು ಬಂದರಿನಲ್ಲಿಯೇ ಉಳಿಯಲಿವೆ.
ಹರಾಜಿಗೆ 13 ವರ್ಷಗಳೇಕೆ?
ಕಾರವಾರ ಬಂದರಿನಲ್ಲಿ 2010ರವರೆಗೂ ಕಬ್ಬಿಣದ ಅದಿರು ರಫ್ತು ಮಾಡಲಾಗುತ್ತಿತ್ತು. ಆದರೆ, ಅಕ್ರಮವಾಗಿಯೂ ಅದಿರು ರಫ್ತಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ದೂರಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅದಿರನ್ನು ವಶಪಡಿಸಿಕೊಂಡಿದ್ದರು.
ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್, ಕರ್ನಾಟಕದ ಅದಿರನ್ನು ಯಾವುದೇ ಕಾರಣಕ್ಕೂ ರಫ್ತು ಮಾಡಿಸುವಂತಿಲ್ಲವೆಂದು ಆದೇಶ ನೀಡಿತ್ತು. ಆದರೆ, ಬಂದರಿನಲ್ಲಿ ಅದಿರು ಹಾಳಾಗುತ್ತಿದೆ. ಗಾಳಿ-ಮಳೆಯಿಂದ ರಾಶಿ ಕರಗುತ್ತಿದೆ ಎಂದು ಆದೇಶವನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳು ನ್ಯಾಯಾಲಯದಲ್ಲಿ ಕೋರಿದ್ದರು.
ಬಳಿಕ, 2020ರಲ್ಲಿ ತನ್ನ ಆದೇಶವನ್ನು ಹಿಂಪಡೆದ ಸುಪ್ರೀಂ ಕೋರ್ಟ್, ಹರಾಜು ಪ್ರಕ್ರಿಯೆ ನಡೆಸಲು ಅನುಮತಿ ನೀಡಿತ್ತು. ಉತ್ತರ ಕನ್ನಡ ಜಿಲ್ಲಾ ಟಾಸ್ಕಫೋಸ್೯ ಅದಿರನ್ನ ಹರಾಜು ಪ್ರಕ್ರಿಯೆಗೆ ಬಿಡ್ ಕರೆದಿತ್ತು. ಹಲವಾರು ಗೊಂದಲಗಳ ಬಳಿಕ ಅಂತಿಮವಾಗಿ ಹರಾಜು ಪ್ರಕ್ರಿಯೆ ಮುಗಿದಿದ್ದು, 13 ವರ್ಷಗಳಿಂದ ರಾಶಿ ಉಳಿದಿದ್ದ ಅದಿರು, ರಫ್ತಾಗಲು ಸಿದ್ದವಾಗಿದೆ.