- ಮಲವಿ ಗ್ರಾಮದಲ್ಲಿ ಮದ್ಯಮಳಿಗೆ ತೆರೆಯದಂತೆ ಎಚ್ಚರಿಕೆ
- ಗ್ರಾಮೀಣ ಭಾಗದಲ್ಲಿ ನಡೆದ ಜಿಲ್ಲಾ ಮಹಿಳಾ ಸಮಾವೇಶ
ದೇವದಾಸಿ ಪದ್ಧತಿ, ಬಾಲ್ಯ ವಿವಾಹ ಹಾಗೂ ಮದ್ಯದಂತಹ ಅನಿಷ್ಟ ಪದ್ದತಿಗಳನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ನಿರುದ್ಯೋಗ ಮತ್ತು ಬಡತನಗಳು ಹೆಚ್ಚಾಗುತ್ತವೆ ಎಂದು ಬಸವ ಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ವಿದ್ಯಾ ಪಟೇಲ್ ಆತಂಕ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ‘ರಾಜ್ಯ ಮಹಿಳಾ ಒಕ್ಕೂಟ ಮತ್ತು ಕೂಲಿ ಕಾರ್ಮಿಕರ ಸಂಘಟನೆ’ ವತಿಯಿಂದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ವಿದ್ಯಾ ಪಾಟೀಲ್ ಮಾತನಾಡಿ, “ಸರ್ಕಾರದ ಶಾಲೆ ಬಾಗಿಲು ತೆರೆಯುವ ಮುನ್ನವೇ ಗ್ರಾಮಗಳಲ್ಲಿ ಮದ್ಯದಂಗಡಿ ತೆರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಮಕ್ಕಳಲ್ಲಿ ಆರೋಗ್ಯದ ಸಮಸ್ಯೆ ಜೊತೆಗೆ ಅನಕ್ಷರತೆ ಸೃಷ್ಠಿಯಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಗ್ರಾಮದ ಹಲವರು ಕುಡಿತಕ್ಕೆ ದಾಸರಾಗಿ ತಮ್ಮ ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಆಗುತ್ತಿಲ್ಲ. ಹಾಗಾಗಿ, ಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಇಲ್ಲದಿದ್ದರೆ ಮದ್ಯದಂಗಡಿ ಮುಂದೆ ಕುಳಿತು ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.
ನಂದಿಪುರ ಕ್ಷೇತ್ರ ಮಹೇಶ್ವರಸ್ವಾಮಿ ಮಾತನಾಡಿ, “ಮಹಿಳೆಯರು ತಮ್ಮ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಂಡು ಪುರುಷರಿಗೆ ಸರಿಸಾಮಾನವಾಗಿ ಜೀವನ ಸಾಗಿಸಬೇಕು. ಉಳಿತಾಯ ಖಾತೆ ತೆರೆದು ಪ್ರಗತಿ ಹೊಂದಬೇಕು. ಇಂತಹ ವಿಚಾರಗಳಿಗೆ ನಿಮಗೆ ಬೆಂಬಲವಾಗಿ ಇರುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ಮಕ್ಕಳ ಕಳ್ಳಿಯನ್ನು ಬಂಧಿಸಿದ ಕಲಾಸಿಪಾಳ್ಯ ಪೊಲೀಸರು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೋರಾಟಗಾರ್ತಿ ಗೀತಾ ಮಾತನಾಡಿ, “ನಮ್ಮ ಕುಟುಂಬದ ಜವಾಬ್ದಾರಿ ನಿರ್ವಹಿಸುವ ಪುರುಷರು ಕುಡಿತದ ಬಲೆಗೆ ಸಿಕ್ಕಿ ಬದಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ” ಎಂದು ಭಾವುಕರಾದರು.
ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ತಾಲೂಕು ಕಾರ್ಯಕರ್ತೆ ಎಂ.ಬಿ ಕೊಟ್ರಮ್ಮ ಮಾತನಾಡಿ, “ಇಡೀ ಕರ್ನಾಟಕದಲ್ಲೇ ಮದ್ಯ ನಿಷೇಧ ಮಾಡಬೇಕೆಂದು ಮೊದಲು ಹೋರಾಟಕ್ಕೆ ಚಾಲನೆ ನೀಡಿದ ಗ್ರಾಮವೆಂದರೆ ಅದು ಮಾಲವಿ ಗ್ರಾಮ. ಆದರೆ, ಇಂದು ಇದೆ ಗ್ರಾಮದಲ್ಲೆ ಕೆಲ ರಾಜಕೀಯ ಪ್ರಭಾವಿಗಳು ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಇದನ್ನು ಗ್ರಾಮದ ಜನರು ತೆರೆಯದಂತೆ ಹೋರಾಟಕ್ಕೆ ಮುಂದಾಗಬೇಕಿದೆ” ಎಂದು ಕರೆಕೊಟ್ಟರು.
ವಿರುಪಮ್ಮ ಅವರು ದೇವದಾಸಿ ಮಹಿಳೆಯರ ಸೌಲಭ್ಯಗಳು ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಬಸಲಿಂಗಮ್ಮ, ರೇಣುಕಮ್ಮ, ಎಲ್ಲಪ್ಪ, ಬುಡೇನ್ ಸಾಬ್, ಮೋಕ್ಷಮ್ಮ ಮಸ್ಕಿ, ಮಲ್ಲೇಶ್ ಅಕ್ಕಮಹಾದೇವಿ, ಹನುಮಂತಪ್ಪ ಸೇರಿದಂತೆ ಹಲವರು ಹಾಜರಿದ್ದರು.