- ವೆಬ್ಸೈಟ್ನಲ್ಲಿ ವಿಡಿಯೋ ಹಂಚಿಕೊಂಡ ರೈಲ್ವೆ ಇಲಾಖೆ
- ಪೊಲೀಸ್ ಸಮಯಪ್ರಜ್ಞೆಯಿಂದ ಬದುಕುಳಿದ ಪ್ರಯಾಣಿಕ
ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸುತ್ತಿದ್ದ ಪ್ರಯಾಣಿಕನೊಬ್ಬ ನಿಯಂತ್ರಣ ತಪ್ಪಿ ರೈಲಿನಡಿ ಸಿಲುಕುವ ವೇಳೆ ರೈಲ್ವೆ ಪೊಲೀಸ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಯುವಕನ ಪ್ರಾಣ ಉಳಿದಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋವನ್ನು ರೈಲ್ವೆ ಇಲಾಖೆಯು ತನ್ನ ವೆಬ್ಸೈಟ್ನಲ್ಲಿ ಹಂಚಿಕೊಂಡಿದೆ. ಗದಗ ಮೂಲದ ಯುವಕ ಹೊಸಪೇಟೆಯಿಂದ ಕೆಲಸದ ನಿಮಿತ್ತ ತೆರಳಿದ್ದನು. ಇಲ್ಲಿಂದ ಹಿಂತಿರುಗಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾಗ ಮೂತ್ರ ವಿಸರ್ಜನೆಗೆ ಹೋಗಲು ನಿಲ್ದಾಣದ ಬಳಿ ಇರುವ ಶೌಚಾಲಯಕ್ಕೆ ತೆರಳಿದ್ದಾನೆ.
ಈ ಸುದ್ದಿ ಓದಿದ್ದೀರಾ? : ಚಾಮರಾಜನಗರ | ಹನೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರೈ
ಶೌಚಾಲಯದ ಸಿಬ್ಬಂದಿ 5 ರೂ. ಕೇಳಿದ್ದಾರೆ. ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಬೆಳಗಾವಿ-ಸಿಕಂದರಾಬಾದ್ ರೈಲಿನ ಒಳಗಿರುವ ಶೌಚಾಲಯಕ್ಕೆ ತೆರಳಿ ಹಿಂತಿರುಗುವಾಗ ರೈಲು ಮುಂದಕ್ಕೆ ಚಲಿಸಿದೆ. ಗಾಬರಿಯಾದ ಯುವಕ ಕೆಳಗಿಳಿಯಲು ಪ್ರಯತ್ನಿಸಿ ನಿಯಂತ್ರಣ ತಪ್ಪಿ ಬಿದಿದ್ದಾನೆ.
ಇನ್ನೇನು ರೈಲು ಚಕ್ರಕ್ಕೆ ಸಿಲುಕುವಷ್ಟರಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ರಾಠೋಡ್ ಎಂಬುವವರು ಯುವಕನನ್ನು ಕೈಹಿಡಿದು ಮೇಲಕ್ಕೆತ್ತಿದ್ದಾರೆ. ಇವರಷ್ಟೇ ಅಲ್ಲದೇ ಪಕ್ಕದಲಿದ್ದ ರೈಲ್ವೆ ಪೊಲೀಸ್ ಗುರುರಾಜ್ ಎಂಬುವವರು ಕೂಡ ಸಹಾಯ ಮಾಡಿ, ಯುವಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.