ವಿಜಯಪುರದ ಖಾಸಗಿ ಲಾಡ್ಜ್ವೊಂದರ ಕೊಠಡಿಯಲ್ಲಿ ಇಬ್ಬರು ಯುವಕರ ಮೃತದೇಹಗಳು ಶುಕ್ರವಾರ ರಾತ್ರಿ ಪತ್ತೆಯಾಗಿವೆ. ಒಬ್ಬನನ್ನು ಕೊಲೆಗೈದು, ಮತ್ತೊಬ್ಬ ಅತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
“ಪ್ರಾಥಮಿಕ ತನಿಖೆ ಪ್ರಕಾರ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯನ್ನು ಕತ್ತು ಹಿಸುಕಿ ಕೊಂದು, ಬಳಿಕ ಆತವೂ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಂಡುಬಂದಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದ್ದಾರೆ.
“ಕೊಲೆಯಾಗಿದ್ದಾನೆಂದು ಶಂಕಿಸಲಾದ ವ್ಯಕ್ತಿ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಶ್ರೀಕಂಠಾಪುರ ತಾಂಡಾದ ಇಂದ್ರಕುಮಾರ್ ಎಂದು ತಿಳಿದುಬಂದಿದೆ. ಲಾಡ್ಜ್ನ ಸ್ವಾಗತ ಕೌಂಟರ್ನಲ್ಲಿ ಮಾ.22ರಂದು ಆತ ತನ್ನ ಆಧಾರ್ ಕಾರ್ಡ್ ಸಲ್ಲಿಸಿ, ಲಾಡ್ಜ್ ಬುಕ್ ಮಾಡಿದ್ದಾನೆ. ಇನ್ನೊಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ” ಎಂದು ಅವರು ಹೇಳಿದ್ದಾರೆ.
“ಇಂದ್ರಕುಮಾರ್ ಬಳಸುತ್ತಿದ್ದ ಬೈಕ್ ವಿಜಯಪುರ ಜಿಲ್ಲೆಯ ಅರಕೇರಿ ತಾಂಡಾ ನಿವಾಸಿಯೊಬ್ಬರ ಹೆಸರಿನಲ್ಲಿ ನೋಂದಣಿಯಾಗಿದೆ” ಎಂದೂ ಅವರು ತಿಳಿಸಿದ್ದಾರೆ.
“ಇಂದ್ರಕುಮಾರ್ ಮತ್ತು ಇನ್ನೊಬ್ಬ ಮಾರ್ಚ್ 22ರಂದು ಲಾಡ್ಜ್ಗೆ ತೆರಳಿದ್ದರು. ಎರಡು ದಿನಗಳಾದರೂ ಅವರು ಕೋಣೆಯಿಂದ ಹೊರಬಂದಿರಲಿಲ್ಲ. ಯಾವುದೇ ಪ್ರತಿಕ್ರಿಯೆಯೂ ಬರಲಿಲ್ಲ. ದುರ್ವಾಸನೆ ಬರುತ್ತಿದ್ದರಿಂದ ಲಾಡ್ಜ್ ಸಿಬ್ಬಂದಿ ಬಾಗಿಲು ತೆರೆದಿದ್ದಾರೆ. ಆ ವೇಳೆ, ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಕೂಡಲೇ ಗಾಂಧಿ ಚೌಕ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಡಿಎಸ್ಪಿ ಸಿದ್ದೇಶ್ವರ್, ಇನ್ಸ್ಪೆಕ್ಟರ್ ಮುರಗುಂಡಿ ಮತ್ತು ಇತರ ಪೊಲೀಸರೊಂದಿಗೆ ಭೇಟಿ ನೀಡಿದ್ದಾರೆ. ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದೇವೆ. ಈಗಾಗಲೇ ಶ್ವಾನ ದಳ ಭೇಟಿ ನೀಡಿದೆ” ಎಂದು ಎಸ್ಪಿ ಆನಂದಕುಮಾರ್ ವಿವರಿಸಿದ್ದಾರೆ.