- 2.6ರಷ್ಟು ತೀವ್ರತೆಯ ಭೂಕಂಪನ ರಿಕ್ಟರ್ ಮಾಪಕದಲ್ಲಿ ದಾಖಲು
- ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದ ಮಾಹಿತಿ
ವಿಜಯಪುರ ಜಿಲ್ಲೆಯ ಹಲವೆಡೆ ಸೋಮವಾರ ರಾತ್ರಿ ಭೂಕಂಪನದ ಅನುಭವವಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಕೂಡ ಇದನ್ನು ದೃಢಪಡಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ರಷ್ಟು ದಾಖಲಾಗಿದೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ 10.41 ಸುಮಾರಿಗೆ ಭೂಕಂಪನವಾಗಿದೆ. ವಿಜಯಪುರದಿಂದ ಈಶಾನ್ಯ ದಿಕ್ಕಿಗೆ 3.3 ಕಿ.ಮೀ. ದೂರದ ಹೆಗಡಿಹಾಳ್, ಕತ್ತಕಾನಹಳ್ಳಿ ಗ್ರಾಮಗಳಲ್ಲಿ ಹಾಗೂ ವಿಜಯಪುರ ನಗರದಲ್ಲಿಯೂ ಭೂಕಂಪನದ ಅನುಭವ ಆಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? : ವಿಡಿಯೊ ಕಾನ್ಫರೆನ್ಸ್ ಮೂಲಕ ಕಂದಾಯ ವ್ಯಾಜ್ಯಗಳ ವಿಚಾರಣೆ ನಡೆಸುವಂತೆ ಹೈಕೋರ್ಟ್ ಸೂಚನೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕರು ಮಾಧ್ಯಮದವರೊಂದಿಗೆ ಮಾತನಾಡಿ, “ಜಿಲ್ಲೆಯಲ್ಲಾಗಿರುವ ಭೂಕಂಪನದ ತೀವ್ರತೆಯು ಕಡಿಮೆಯಾಗಿದ್ದು, ಭೂಕಂಪನ ಕೇಂದ್ರದಿಂದ 30-40 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ” ಎಂದು ತಿಳಿಸಿದರು.
“ಭೂಕಂಪನದ ತೀವ್ರತೆ ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ. ಇಂತಹ ಭೂಕಂಪನಗಳು ಜಿಲ್ಲೆಯಲ್ಲಿ ಆಗಾಗ ಸಂಭವಿಸುತ್ತಿರುತ್ತದೆ. ಹಾಗಾಗಿ ಯಾರೂ ಕೂಡ ಭಯ ಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.