- ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸಲು ಹುನ್ನಾರ – ಆರೋಪ
- ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಭೂಮಿ ವರ್ಗಾವಣೆ
ಕಾಡಂಚಿನ ಗ್ರಾಮದಲ್ಲಿ ಕಳೆದ 80 ವರ್ಷಗಳಿಂದ ವಾಸವಿರುವ ಮನೆ ಮತ್ತು ಸಾಗುವಳಿ ಮಾಡುತ್ತಿರುವ ಜಮೀನಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ನಡಹಳ್ಳಿ ಗ್ರಾಮಸ್ಥರು ಸಕಲೇಶಪುರ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು.
“ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ಸರ್ವೆ ನಂ. 197ರಲ್ಲಿ ಸುಮಾರು 80 ವರ್ಷಗಳಿಗೂ ಹಿಂದಿನಿಂದಲೂ ನಮ್ಮ ಪೂರ್ವಜರ ಕಾಲದಿಂದಲೂ ಹದಿನೈದು ಕುಟುಂಬಗಳು ಮನೆ, ಗದ್ದೆ, ತೋಟ ಮಾಡಿಕೊಂಡು ವಾಸವಾಗಿರುತ್ತೇವೆ” ಎಂದು ಮನವಿ ಸಲ್ಲಿಸಿದ ಗ್ರಾಮಸ್ಥರು ತಿಳಿಸಿದರು.
“2010-11ರಲ್ಲಿ ಯಾವುದೇ ಕಾರಣವಿಲ್ಲದೆ, ನಮಗೆ ಯಾವುದೇ ನೋಟಿಸ್ ನೀಡದೆ, ಅರಣ್ಯ ಇಲಾಖೆಯವರು ನಮ್ಮ ಮನೆ, ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನು ಎಲ್ಲವನ್ನು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾಯಿಸಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಇದರಿಂದಾಗಿ ನಮ್ಮ ಬದುಕುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಆದ್ದರಿಂದ ಕೂಡಲೆ ಅಧಿಕಾರಿಗಳು ನಡಹಳ್ಳಿ ಗ್ರಾಮದ ಸರ್ವೆ ನಂಬರ್ 197ಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಬೇಕು. ಗ್ರಾಮಸ್ಥರು ಈಗಾಗಲೇ 53, 57, 94ಸಿ ಅಡಿ ಸಾಗುವಳಿ ಭೂಮಿ ಮತ್ತು ಮನೆಗೆ ಹಕ್ಕುಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿ ಅರಣ್ಯ ಇಲಾಖೆಗೆ ವರ್ಗಾವಣೆಯಾಗಿರುವುದನ್ನು ರದ್ದುಪಡಿಸಿ ನಮ್ಮಗೆ ಹಕ್ಕುಪತ್ರ ಕೊಡಿಸಬೇಕು” ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ನಡಹಳ್ಳಿ ಗ್ರಾಮಸ್ಥರಾದ ನಾಗೇಶ್, ಜಗದೀಶ್, ಧರ್ಮರಾಜ್, ಯುನಸ್, ನದಿಮ್, ಕುಮಾರಯ್ಯ, ಪರಮೇಶ್, ಶೀಲಾ, ಮಂಜುಳಾ, ಮೀನಾಕ್ಷಿ, ಪಾರ್ವತಿ, ಮಂಜಮ್ಮ, ಪುಟ್ಟಮ್ಮ, ಶೋಭಾ ಜಯಂತಿ ಹಾಗೂ ಇತರರು ಇದ್ದರು.