- ಗ್ರಾಮದಲ್ಲಿ ಜೆಲ್ಲಿ ಕ್ರಷರ್ಗೆ ಅನುಮತಿ ನೀಡಿದ್ದಕ್ಕೆ ಕ್ರೋಶ
- 13 ಹಳ್ಳಿಗಳಿಂದ ಒಟ್ಟು 5,000ಕ್ಕೂ ಹೆಚ್ಚು ಮತದಾರರಿದ್ದಾರೆ
ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯ 13 ಗ್ರಾಮಗಳ ಜನರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ನೀಡಿದ ಕಾರಣಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಕ್ರಷರ್ ನಡೆಸಲು ಅನುಮತಿ ನೀಡಲಾಗಿದೆ. ಗಣಿ ಮತ್ತು ಭೂವಿಜ್ಞಾನ ಹಾಗೂ ತುಮಕೂರು ಜಿಲ್ಲಾಧಿಕಾರಿಯಿಂದ ‘ಶ್ರೀ ಧನಲಕ್ಷ್ಮಿ ಸ್ಟೋನ್ ಕ್ರಷರ್’ಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಕ್ರಷರ್ ಪ್ರಾರಂಭಿಸಬಾರದು ಎಂದು ಗ್ರಾಮಸ್ಥರು 2016ರರಿಂದಲೂ ಹೋರಾಟ ನಡೆಸುತ್ತಿದ್ದಾರೆ.
ಗ್ರಾಮಸ್ಥರ ಮನವಿಗಳಿಗೆ ಅಧಿಕಾರಿಗಳು ಸ್ಪಂದಿಸದ ಕಾರಣ, ಅಧಿಕಾರಿಗಳ ನಡೆಗೆ ಬೇಸತ್ತಿರುವ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ತುಮಕೂರು ತಾಲೂಕು ವ್ಯಾಪ್ತಿಯ ಬೆಳಧರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರೋಬ್ಬರಿ 13 ಗ್ರಾಮಗಳ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ.
ಚಿನಿವಾರನಹಳ್ಳಿ, ಜಕ್ಕೆನಹಳ್ಳಿ, ಅನ್ನದಾನಿಪಾಳ್ಯ, ಸೀಗೇಹಳ್ಳ, ಗೌಡನಕಟ್ಟೆ, ಮಲ್ಲಯ್ಯನಪಾಳ್ಯ, ಚನ್ನಮುದ್ದನಹಳ್ಳಿ, ಮಸಣಿಪಾಳ್ಯ, ಅಹೋಬಲ ಅಗ್ರಹಾರ, ಹಿರೇಕೊಡತಕಲ್ಲು, ಮುದ್ದರಾಮಯ್ಯನಪಾಳ್ಯ ಸೇರಿ 13 ಹಳ್ಳಿಗಳು ಈ ನಿರ್ಧಾರ ಕೈಗೊಂಡಿವೆ.
ಈ ಸುದ್ದಿ ಓದಿದ್ದೀರಾ? ರೈತರ ಹಕ್ಕೊತ್ತಾಯ ಈಡೇರಿಸುವುದಾಗಿ ಘೋಷಣೆ: ಪ್ರಮಾಣ ಪತ್ರಕ್ಕೆ ಸಹಿ ಹಾಕಿದ ಕಾಂಗ್ರೆಸ್ ಮತ್ತು ಜೆಡಿಎಸ್
13 ಹಳ್ಳಿಯ ಒಟ್ಟು 5000 ಕ್ಕೂ ಹೆಚ್ಚು ಮತದಾರರಿಂದ ಬಹಿಷ್ಕಾರ ಅಭಿಯಾನ ನಡೆಯುತ್ತಿದ್ದಾರೆ. ಪ್ರತಿ ಗ್ರಾಮದಲ್ಲೂ ಪ್ಲೆಕ್ಸ್ ಹಾಕಿ ಬಹಿಷ್ಕಾರದ ಬಗ್ಗೆ ಮತದಾರರು ಅಭಿಯಾನ ಹಮ್ಮಿಕೊಂಡಿದ್ದು, ಕ್ರಷರ್ ಅನುಮತಿ ರದ್ದು ಪಡಿಸುವವರೆಗೂ ಮತದಾನ ಮಾಡೋಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.