- ಸಂಸದ ಡಿ ಕೆ ಸುರೇಶ್ ಅವರು ಪ್ರೀತಿಯಿಂದಲೇ ಮಾತನಾಡಿಸಿದ್ದಾರೆ
- ವಾರ್ನಿಂಗ್ ಮಾಡಿರುವ ಸುದ್ದಿ ಸುಳ್ಳು ಎಂದ ಎಂ ಬಿ ಪಾಟೀಲ
ಶಾಸಕಾಂಗ ಪಕ್ಷದ ಸಭೆ ಮುಗಿಸಿ ಬರುತ್ತಿದ್ದಾಗ ವಿಧಾನಸೌಧದಲ್ಲಿ ಎಂ ಬಿ ಪಾಟೀಲ ಅವರೇ ಅಂತಾ ಸಂಸದ ಡಿಕೆ ಸುರೇಶ್ ಪ್ರೀತಿಯಿಂದಲೇ ಕರೆದರು. ಡಿಕೆ ಸುರೇಶ್ ಮತ್ತು ಡಿ ಕೆ ಶಿವಕುಮಾರ್ ಯಾರು ನನಗೆ ವಾರ್ನ್ ಮಾಡಿಲ್ಲ. ನನ್ನ ಮತ್ತು ಅವರ ಸಂಬಂಧ ಚೆನ್ನಾಗಿದೆ. ಸುಮ್ಮನೇ ಸುಳ್ಳು ಸುದ್ದಿ ಹರಡಬೇಡಿ ಎಂದು ನೂತನ ಸಚಿವ ಎಂ ಬಿ ಪಾಟೀಲ್ ಹೇಳಿದರು.
ಸಂಸದ ಡಿ ಕೆ ಸುರೇಶ್ ಅವರು ಎಂ ಬಿ ಪಾಟೀಲ ಅವರಿಗೆ ವಾರ್ನ್ ಮಾಡಿದ್ದಾರೆ ಎನ್ನುವ ಸುದ್ದಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಪ್ರತಿಕ್ರಿಯಿಸಿ, “ನಾನು ಆರು ಬಾರಿ ಶಾಸಕನಾಗಿರುವೆ. ಗೃಹಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಎಂಬ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ನಾನು ಅವರಿಗೆ ವಾರ್ನಿಂಗ್ ಮಾಡಿಲ್ಲ, ಅವರು ನನಗೆ ವಾರ್ನಿಂಗ್ ಮಾಡಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ?: ಷರತ್ತು ಇಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ, ಇಲ್ಲದಿದ್ದರೆ ವಿರೋಧಿ ಅಭಿಯಾನ: ಎಚ್ಡಿಕೆ ಎಚ್ಚರಿಕೆ
ಬುಧವಾರ ಬೆಳಗ್ಗೆ ಎದುರಿಗೆ ಸಿಕ್ಕ ಎಂ ಬಿ ಪಾಟೀಲ ಅವರಿಗೆ ನೇರವಾಗಿ ಡಿ ಕೆ ಸುರೇಶ್ ಅವರು ವಾರ್ನಿಂಗ್ ಮಾಡಿದರು ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ವೇಳೆ ಡಿಕೆ ಸುರೇಶ್ ಅವರು ಎಂಬಿ ಪಾಟೀಲ್ ಅವರಿಗೆ ಗುರಾಯಿಸಿಕೊಂಡು “ಸ್ವಲ್ಪ ಬಿಗಿಯಾಗಿರಲಿ” ಎಂದು ಬಹಿರಂಗವಾಗಿಯೇ ಎಲ್ಲರ ಮುಂದೆ ವಾರ್ನ್ ಮಾಡಿದ್ದರು ಎಂದು ಸುದ್ದಿಯಾಗಿತ್ತು.
ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂ ಬಿ ಪಾಟೀಲ್, “ಸಿದ್ದರಾಮಯ್ಯ ಅವರು ಪೂರ್ಣಾವಧಿ ಸಿಎಂ ಆಗಲಿದ್ದಾರೆ” ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಡಿ ಕೆ ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂದು ಎದುರಿಗೆ ಭೇಟಿಯಾದಾಗ ವಾರ್ನ್ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಅಂಥದ್ದೇನು ನಡೆದಿಲ್ಲ, ನಮ್ಮ ಸಂಬಂಧ ಚೆನ್ನಾಗಿದೆ ಎಂದು ತಿಳಿಗೊಳಿಸಿದರು.