ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯ (ಏಪ್ರಿಲ್ 14) ನಂತರ ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆಯನ್ನು ಘೋಷಿಸಬೇಕು. ಅಂಬೇಡ್ಕರ್ ಜಯಂತಿ ಆಚರಣೆ ಸಮಯದಲ್ಲಿ ಯಾವುದೇ ನಿರ್ಬಂಧಗಳಿರಬಾರದು ಎಂದು ಚುನಾವಣಾ ಆಯೋಗವನ್ನು ಕರ್ನಾಟಕ ಭೀಮ್ ಸೇನೆ ಒತ್ತಾಯಿಸಿದೆ.
ಯಾದಗಿರಿಯಲ್ಲಿ ಜಿಲ್ಲೆಯ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರವನ್ನು ಸಂಘಟನೆಯ ಕಾರ್ಯಕರ್ತರು ಸಲ್ಲಿಸಿದ್ದಾರೆ. “2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆಯು ಏಪ್ರಿಲ್ 10ರಿಂದ ಜಾರಿಯಾಗಬಹುದೆಂದು ಕೆಲವು ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ. ಇದು ನಿಜವೇ ಆಗಿದ್ದಲ್ಲಿ, ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ರಾಜ್ಯದ ಜನರಿಗೆ ತೊಡಕಾಗುತ್ತದೆ. ಹಾಗಾಗಿ, ಏಪ್ರಿಲ್ 14ರ ನಂತರ ನೀತಿಸಂಹಿತೆಯನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಚುನಾವಣಾ ನೀತಿ ಸಂಹಿತೆಯಿಂದ ಅಂಬೇಡ್ಕರ್ ಜಯಂತಿ ಆಚರಣೆಗೆ ಯಾವುದೇ ನಿರ್ಬಂಧ ಅನ್ವಯವಾಗದು ಎಂದು ಘೋಷಿಸಬೇಕು. ಆ ಮೂಲಕ, ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರರಿಗೆ ಗೌರವ ಸಲ್ಲಿಸಬೇಕು. ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡುವ ಜನರ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸಂಘಟನೆಯ ಮುಖಂಡ ರಮೇಶಕುಮಾರ, ಮರಿಲಿಂಗಪ್ಪ ಚಟ್ನಳ್ಳಿ, ಮಹೇಶ್ ಖಾನಾಪೂರ, ವಾಸುದೇವ, ವಿಶ್ವರಾಧ್ಯ ಸತ್ಯನೋರ, ಆಂಜನೇಯ ಶಿರವಾಳ, ಭೀಮಾಶಂಕರ್ ಬಡಿಗೇರ, ಮಾಳಪ್ಪ ಖಾನಾಪೂರ, ಶ್ರೀಶೈಲ ಚಟ್ನಳ್ಳಿ ಇದ್ದರು.