ಗೋಗಡಿಹಾಳ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಈ ಶಾಲೆಯಲ್ಲಿ ಸುಮಾರು 75 ವಿದ್ಯಾರ್ಥಿಗಳು ಇದ್ದು, ಇಷ್ಟೂ ಮಂದಿ ವಿದ್ಯಾರ್ಥಿಗಳಿಗೆ ಕೇವಲ ಒಬ್ಬರೇ ಖಾಯಂ ಶಿಕ್ಷಕರಿದ್ದಾರೆ. ಒಬ್ಬರೇ ಶಿಕ್ಷಕರಿಂದ ಕಚೇರಿಯ ಕೆಲಸ ಮತ್ತು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದಕ್ಕೆ ತುಂಬಾ ತೊಂದರೆಯಾಗಿದೆ ಎಂದು ಎಐಕೆಕೆಎಮ್ಎಸ್ ಉಪಾಧ್ಯಕ್ಷ ಜಮಾಲ್ ಸಹಾಬ್ ಹೇಳಿದರು.
ಗೋಗಡಿಹಾಳ ಗ್ರಾಮದ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿ ಎಐಕೆಕೆಎಮ್ಎಸ್ ಹಾಗೂ ಎಐಡಿಎಸ್ಒ ನೇತೃತ್ವದಲ್ಲಿ ಯಾದಗಿರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಒಬ್ಬರೇ ಶಿಕ್ಷಕರಿಂದ ಎಲ್ಲ ಕೆಲಸವೂ ಆಗಬೇಕೆಂದರೆ ಮಕ್ಕಳ ಕಲಿಕೆ ಕುಂಠಿತವಾಗಿ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಈಗಾಗಲೇ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಈ ಶಾಲೆಗೆ ಶಿಕ್ಷಕರನ್ನು ನೇಮಿಸಬೇಕು” ಎಂದು ಆಗ್ರಹಿಸಿದರು.
ಎಐಡಿಎಸ್ಒನ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಮಾತನಾಡಿ, “ಶಾಲೆಗೆ ಸಮರ್ಪಕ ಶಿಕ್ಷಕರನ್ನು ನೇಮಿಸಬೇಕಾಗಿರುವುದು ಸರ್ಕಾರದ ಕನಿಷ್ಠ ಜವಾಬ್ದಾರಿ. ಈ ಕನಿಷ್ಠ ಅವಶ್ಯಕತೆಯನ್ನು ಪೂರೈಸದಿರುವುದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಸರ್ಕಾರಿ ಶಾಲೆಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ನೀಡದೆ ಸರ್ಕಾರ ಬಡಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಯಾವ ಸರ್ಕಾರ ಸರಕಾರಿ ಶಾಲೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕೋ ಅವರೇ ಇಂದು ಸರ್ಕಾರಿ ಶಾಲೆಗಳನ್ನು ಮುಚ್ಚಲು ಕಾರಣಕರ್ತರಾಗಿದ್ದಾರೆ. ರಾಜ್ಯಾದ್ಯಂತ 4,700 ಸರ್ಕಾರಿ ಶಾಲೆಗಳು, ಏಕೋಪಾಧ್ಯಾಯ ಶಾಲೆಗಳಿವೆ. ಇದನ್ನು ಎಐಡಿಎಸ್ಒ ತೀವ್ರವಾಗಿ ಖಂಡಿಸುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮನೆ ಬಾಗಿಲಿಗೆ ಇ-ಸ್ವತ್ತು ‘ಜನಸ್ನೇಹಿ ಕಾರ್ಯಕ್ರಮ’ಕ್ಕೆ ಮತ್ತೆ ಚಾಲನೆ ನೀಡಿದ ಸಿಇಒ ದಿವಾಕರ್
ಮನವಿ ಪತ್ರ ಸ್ವೀಕರಿಸಲು ಬಂದ ಅಧಿಕಾರಿಗಳು ಸಮರ್ಪಕ ಪರಿಹಾರ ಕೊಡದಿದ್ದಕ್ಕೆ, ಮಕ್ಕಳೊಂದಿಗೆ ಡಿಡಿಪಿಐ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.