ಯಾದಗಿರಿ ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ.
ಜಿಲ್ಲೆಯ ಮುದ್ನಾಳ ಪಂಚಾಯಿತಿಯ ಮುದ್ನಾಳ, ಹಾಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಡಿಹಾಳ ಮತ್ತು ಗುಂಡಗುರ್ತಿ ಪಂಚಾಯಿತಿ ವ್ಯಾಪ್ತಿಯ ಟೋಕಾಪುರ ಗ್ರಾಮಗಳಲ್ಲಿ ಸರ್ಕಾರಿ ಗಾಯರಾಣ ಜಾಗವನ್ನು ಕೆಲವು ಪಟ್ಟಭದ್ರ ಶಕ್ತಿಗಳು, ಒತ್ತುವರಿ ಮಾಡಿ ಸರ್ಕಾರಿ ಜಾಗದಲ್ಲಿ ಬೃಹತ್ ಆಕಾರದ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ವೇಳೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಉಮೇಶ ಕೆ. ಮುದ್ನಾಳ ಅವರು ಆರೋಪಿಸಿದರು.
“ಮನೆ ನಿರ್ಮಾಣಕ್ಕೆ ತಳಪಾಯ ಹಾಕುತ್ತಿದ್ದಾಗಲೇ ಅಧಿಕಾರಿಗಳಿಗೆ ದೂರು ಕೊಟ್ಟಿದ್ದೆವು. ಆದರೆ, ಮನೆ ಮುಕ್ತಾಯಗೊಂಡರೂ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರ ವಿರುದ್ಧ ಯಾದಗಿರಿ ಮತ್ತು ಶಹಾಪುರದ ಜೆಸ್ಕಾಂ ಎಇಇ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ದೂರಿದರು.
“ಜೆಸ್ಕಾಂ ಅಧಿಕಾರಿಗಳು ನಾಮಕಾವಸ್ತೆಗೆ ಗ್ರಾಮಕ್ಕೆ ಭೇಟಿ ನೀಡಿ, ವಿದ್ಯುತ್ ತೆರವುಗೊಳಿಸದೇ ಸುಳ್ಳು ದಾಖಲೆ ಸೃಷ್ಟಿಸುತ್ತಿದ್ದು, ಎಂಜಲು ಕಾಸಿಗೆ ಅವರ ಗುಲಾಮರಾಗಿ ವರ್ತಿಸುತ್ತಿದ್ದಾರೆ. ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಈ ಮೂರೂ ಗ್ರಾಮಗಳಿಗೆ ಆಕಸ್ಮಿಕ ಭೇಟಿ ನೀಡಿ ಸಂಪೂರ್ಣ ವರದಿ ತರಿಸಿಕೊಂಡು ಊರು ಅಭಿವೃದ್ಧಿ ಮಾಡದ ಅಧಿಕಾರಿಗಳು ತಾವೇ ಅಬಿವೃದ್ಧಿಯಾಗುತ್ತಿದ್ದಾರೆ. ಸಮಯಕ್ಕ ಸರಿಯಾಗಿ ಕಚೇರಿಗೆ ಹೋಗದೆ ಯಾದಗಿರಿಯಲ್ಲಿ ಕುಳಿತು ರಾಜಕೀಯ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ?” ಎಂದಿದ್ದಾರೆ.
“ಈ ಮೂರು ಗ್ರಾಮಗಳಲ್ಲಿ ಚರಂಡಿಗಳು ಗಬ್ಬೆದ್ದು ನಾರುತ್ತಿರುವ ಕುರಿತು ಎಲ್ಲ ದಿನಪತ್ರಿಕೆ, ಮಾಧ್ಯಮಗಳಲ್ಲಿ ಆರು ತಿಂಗಳು ಹಿಂದೆಯೇ ವರದಿಯಾಗಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮೆಹಬೂಬ್ ಸುಭಾನಿ ದರ್ಗಾ ಎದುರಿನ ತಡೆಗೋಡೆ ತೆರವಿಗೆ ಆಗ್ರಹ
“ಮೂರೂ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ವ್ಯವಸ್ಥೆ ಮಾಡಬೇಕು. ಸಿಸಿ ರಸ್ತೆ, ಚರಂಡಿಗಳನ್ನು ನಿರ್ಮಿಸಿ ರಸ್ತೆ ಮೇಲೆ ಹರಿಯುವ ಹೊಲಸು ನೀರಿನಿಂದ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಬೇಕು” ಎಂದು ಒತ್ತಾಯಿಸಿದರು.
“ಅಕ್ರಮ ಎಸಗಿದವರ ವಿರುದ್ಧ ಕೂಡಲೇ ಕ್ರಮ ಕೈಗೊಂಡು, ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧವೇ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.