- ಅಂಬೇಡ್ಕರ್ ಅವರ 132ನೇ ಜಯಂತೋತ್ಸವದ ಅಂಗವಾಗಿ ಸೇವೆ ಆರಂಭ
- ನಗರದ ಹಲವು ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಅರವಟಿಗೆ ಇಟ್ಟ ಯುವಕರು
ರಾಜ್ಯದಲ್ಲಿ ದಿನದಿಂದ ದಿನಕ್ಕೆ ತೀವ್ರವಾಗಿ ಬೇಸಿಗೆಯ ಬಿರು ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಂಘಟನೆ ಯುವಜನರು ನೀರಿನ ಅರವಟಿಗೆಗಳ ಸೇವೆ ಆರಂಭಿಸಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದಲ್ಲಿ ಮಂಗಳವಾರ ನೀರಿನ ಅರವಟಿಗೆ ಸೇವೆಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಪ್ರಕಾಶ್ ಕರಕೀಕಟ್ಟಿ, “ಪ್ರಸ್ತುತ ದಿನಮಾನಗಳಲ್ಲಿ ಬೇಸಿಗೆ ಹವೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಅಂಗವಿಕಲರು ಹಾಗೂ ವೃದ್ಧರು ನೀರಿನ ದಾಹ ಇಂಗಿಸಿಕೂಳ್ಳಲು ಕುಡಿಯುವ ನೀರಿನ ಅರವಟಿಗೆ ಅವಶ್ಯಕವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: ಚಾಮರಾಜನಗರ | ವಿಚಿತ್ರ ಘಟನೆ; ಎರಡೆರಡು ಬಾರಿ ಮೃತಪಟ್ಟ ಚುನಾವಣಾ ಸಿಬ್ಬಂದಿ!
“ಅರವಟಿಗೆ ಸೇವೆಯನ್ನು ಬೆಳವಣಿಕೆ ಗ್ರಾಮದ ಡಿವೈಎಫ್ಐ ಸಂಘಟನೆ ಯುವಕರು ಬಸ್ ನಿಲ್ದಾಣ ಸೇರಿದಂತೆ ಗ್ರಾಮದ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಮಾಡುತ್ತಿರುವ ಒಳ್ಳೆಯ ಕಾರ್ಯ” ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್ಐ ಮುಖಂಡ ಸಲ್ಮಾನ್ ಹುಲ್ಲೂರು, ಹನಮಂತ ಮಾದರ, ಹಾಲಭಾವಿ ವಕೀಲರು, ಸಿಐಟಿಯು ಜಿಲ್ಲಾ ಅಧ್ಯಕ್ಷ ಮಹೇಶ್ ಹೀರೆಮಠ, ಸಂಕಪ್ಪ ಕುರಹಟ್ಟಿ, ಮೈಲಾರಪ್ಪ ಮಾದರ, ಹನಮಂತ ತಾಳಿ, ರಾಮಣ್ಣ ಮಲ್ಲಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.